ಹಾಸನ: ಜಿಲ್ಲೆಯ ಬಹುವರ್ಷಗಳ ಕನಸಾದ ಹಾಸನ ಟು ಬೆಂಗಳೂರು ನೇರ ಪ್ರಯಾಣಿಕರ ರೈಲು ಸಂಚಾರ ಫೆಬ್ರವರಿ ಅಂತ್ಯದ ವೇಳೆಗೆ ಆರಂಭಗೊಳ್ಳುವ ನಿರೀಕ್ಷೆಯಿದೆ. ನೆಲಮಂಗಲದಿಂದ ಶ್ರವಣಬೆಳಗೋಳದವರೆಗೆ 4 ದಿನಗಳ ಕಾಲ ತಪಾಸಣೆ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಹೊಸ ಮಾರ್ಗ ರೈಲು ಓಡಾಟಕ್ಕೆ ಸೇಫ್ ಎಂದು ತಿಳಿಸಿದೆ.
ಈಗಾಗಲೇ ಕಾಮಗಾರಿ ಪೂರ್ಣವಾಗಿದ್ದು ಹಳಿ ಜೋಡಣೆ, ಸೇತುವೆ, ರೈಲ್ವೆ ನಿಲ್ದಾಣ ಮತ್ತು ಸಿಗ್ನಲ್ ವ್ಯವಸ್ಥೆ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ತಪಾಸಣೆ ನಡೆಸಿದೆ. ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಶ್ರವಣಬೆಳಗೋಳದಿಂದ ನೆಲಮಂಗಲದ ವರೆಗೆ ಪ್ರಾಯೋಗಿಕ ರೈಲು ಸಂಚಾರ ಸಹ (ಸ್ಪೀಡ್ ಟ್ರಯಲ್) ನಡೆಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಹೊಸ ಮಾರ್ಗದಲ್ಲಿ ರೈಲು ಹಳಿಯ ಸ್ಥಿತಿಗತಿ ನಮಗೆ ತೃಪ್ತಿಕರವಾಗಿದೆ. ಕೆಲವು ಕಡೆ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಆದಷ್ಟು ಶೀಘ್ರ ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಹಾಸನ-ಬೆಂಗಳೂರು ನಡುವಿನ ಅಂತರ 167 ಕಿಮೀ ಗೆ ಕುಗ್ಗಲಿದೆ. ಶೇ. ನೂರರಷ್ಟು ಎಲ್ಲವೂ ಸರಿಯಾದ ನಂತರ ಹೊಸ ಮಾರ್ಗದಲ್ಲಿ ರೈಲು ಓಡಾಟವನ್ನು ಅಧಿಕೃತಗೊಳಿಸಲಾಗುವುದು ಎಂದಿರುವುದು ಈ ತಿಂಗಳಾಂತ್ಯಕ್ಕೆ ನೇರ ರೈಲು ಕನಸು ನನಸಾಗಲಿದೆ ಎಂಬ ಆಸೆಯನ್ನು ಇನ್ನಷ್ಟು ಬಲಗೊಳಿಸಿದೆ.