ಪುಣೆ: ಮಾಣಿಕ್ ಚಂದ್ ಗುಟ್ಕಾ ಕಂಪನಿಯ ಮಾಲೀಕ ಮಾಲೀಕ್ ರಸಿಕ್ಲಾಲ್ ಮಾಣಿಕ್ಚಂದ್ ಧರಿವಾಲ್ (80) ಪುಣೆಯ ರೂಬಿ ಹಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ 8 ಗಂಟೆಯ ವೇಳೆಗೆ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರಿನಲ್ಲಿ ಜನಸಿದ್ದ ಧರಿವಾಲ್ ಅವರು, ತನ್ನ ತಂದೆ 20 ಬೀಡಿ ಕಾರ್ಖಾನೆಗಳನ್ನು ಅನುವಂಶಿಕವಾಗಿ ಪಡೆದಿದ್ದರು. ನಂತರ ಗುಟ್ಕಾ ವ್ಯವಹಾರದಲ್ಲಿ ಹೆಸರು ಮಾಡಿದ್ದರು. ಧರಿವಾಲ್ ಅವರ ಮೇಲೆ 2004 ರಲ್ಲಿ ಮುಂಬೈ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ಕಾಯ್ದೆ (ಮೋಕಾ) ಯ ಅಡಿ ದೂರು ದಾಖಲಿಸಿದ್ದರು. ಪ್ರಸುತ್ತ ಅವರ ಮರಣದಿಂದ ಅವರ ಮೇಲಿನ ವಿಚಾರಣೆ ಸ್ಥಗಿತಗೊಳ್ಳಲಿದೆ ಎಂದು ಧರಿವಾಲ್ ಪರ ವಕೀಲ ಹೇಳಿದ್ದಾರೆ.
ಕಳೆದ ವರ್ಷ ಕೇಂದ್ರ ತನಿಖಾ ದಳ (ಸಿಬಿಐ) ಪೊಲೀಸರು ಧರಿವಾಲ್ ಮತ್ತು ಜೋಷಿ ಅವರ ವಿರುದ್ಧ ಪಾಕಿಸ್ತಾನ ಕರಾಚಿಯಲ್ಲಿ ಗುಟ್ಕಾ ಉತ್ಪಾದನಾ ಘಟಕ ಸ್ಥಾಪನೆಯ ಆರೋಪದಡಿ ಪ್ರಕರಣವನ್ನು ದಾಖಲಿಸಿದ್ದರು. ಅಲ್ಲದೇ ಇವರ ಮೇಲೆ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಪರ ಕಾರ್ಯ ನಿರ್ವಹಿಸುತ್ತಿರುವ ಕುರಿತು ಆರೋಪವನ್ನು ಮಾಡಲಾಗಿತ್ತು.
ಧರಿವಾಲ್ ವಿರುದ್ಧ ಎಷ್ಟೇ ಆರೋಪಗಳಿದ್ದರೂ ಎಂದು ಅವರು ಪೊಲೀಸ್ ಕಸ್ಟಡಿಗೆ ಒಳಪಟ್ಟಿರಲಿಲ್ಲ. ಇವರ ಬಂಧನದ ಸಮಯದಲ್ಲಿ ಅನಾರೋಗ್ಯದ ಕುರಿತ ದಾಖಲೆಗಳನ್ನು ನೀಡಿ ಜಾಮೀನು ಪಡೆಯುತ್ತಿದ್ದರು.
ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರರದಲ್ಲಿ ಗುಟ್ಕಾ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸಿದ ನಂತರ ಪ್ಯಾಕೇಜಿಂಗ್, ರೋಲರ್ ಹಿಲ್ ಗಿರಣಿ, ರಿಯಲ್ ಎಸ್ಟೇಟ್, ಪವನ ಶಕ್ತಿ, ಪ್ಯಾಕ್ಡ್ ಕುಡಿಯುವ ನೀರು ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿದ್ದರು.