ಗದಗ: ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಗದಗನ ಬೆಟಗೇರಿಯ ಮಂಜುನಾಥ ನಗರದಲ್ಲಿ ನಡೆದಿದೆ.
ತಡರಾತ್ರಿ ಈ ಗಲಾಟೆ ಸಂಭವಿಸಿದ್ದು, ಈ ವೇಳೆ ಕಿಡಿಗೇಡಿಗಳು ನಾಲ್ಕು ಬೈಕ್ಗಳು ಹಾಗೂ ಒಂದು ಟಂ ಟಂ ಜಖಂಗೊಳಿಸಿದ್ದಾರೆ. ನಂತರ ಕೆಲವರ ಮನೆಗಳಿಗೆ ಕಲ್ಲು ಹಾಗೂ ಕಟ್ಟಿಗೆ ಬೀಸಿ ಮನೆಯ ಬಾಗಿಲು, ಕಿಟಕಿಗಳು ಮತ್ತು ಮನೆ ಮುಂಭಾಗದ ಕೆಲವು ವಸ್ತುಗಳನ್ನ ಧ್ವಂಸಗೊಳಿಸಿದ್ದಾರೆ.
ಗದಗ ಡಿವೈಎಸ್ಪಿ ವಿಜಯ್ಕುಮಾರ ಹಾಗೂ ಬೆಟಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.