ಬೆಳಗಾವಿ: ನನಗೆ ಯಾರೂ ಇಲ್ಲ, ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ನಿಮ್ಮ ಕಾಲಿಗೆ ಬೀಳ್ತಿನಿ, ಒಂದು ವಿಷದ ಇಂಜೆಕ್ಷನ್ ಕೊಡಿಸಿ. ಹೀಗೆ ಕಣ್ಣೀರಿಡುತ್ತಾ ವಿನಂತಿ ಮಾಡ್ತಿರೋ ಈ ಹಿರಿಯಜ್ಜಿಯ ಹೆಸ್ರು ಚನ್ನವ್ವ. ಬೆಳಗಾವಿಯ ವಕ್ಕುಂದ ಗ್ರಾಮದಾಕೆ.
ಎಲ್ಲವೂ ಸರಿಯಾಗಿದ್ದರೆ ಚನ್ನವ್ವ, ಮರಿಮಕ್ಕಳ ಜೊತೆ ಆಟವಾಡುತ್ತಾ ಮಕ್ಕಳ ಆರೈಕೆಯಲ್ಲಿ ಸುಖವಾಗಿ ಕಾಲ ಕಳೆಯಬೇಕಾಗಿತ್ತು. ಆದರೆ ವಿಧಿ ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಯ ಮಹಿಳಾ ವಾರ್ಡ್ನ ನೆಲದ ಮೇಲಿನ ಬೆಡ್ ಮೇಲೆ ದಿನದೂಡುವಂತೆ ಮಾಡಿದೆ.
ಆರೋಗ್ಯದಲ್ಲಿ ಏರುಪೇರಾಗಿದ್ದ ಚನ್ನವ್ವರನ್ನು ಎರಡು ತಿಂಗಳ ಹಿಂದೆ ಯಾರೋ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಬಳಿಕ ಅತ್ತ ಕಡೆ ಯಾರೂ ತಿರುಗಿ ನೋಡಿಲ್ಲ. ಆಸ್ಪತ್ರೆಯಲ್ಲಿರುವ ಇತರ ರೋಗಿಗಳ ಸಂಬಂಧಿಕರು ಅಜ್ಜಿಗೆ ಊಟ, ತಿಂಡಿ ನೀಡುತ್ತಿದ್ದಾರೆ.
ಈ ಹಿರಿಯಜ್ಜಿ ಎದ್ದು ನಡಿಯುವ ಸ್ಥಿತಿಯಲ್ಲಿಲ್ಲ. ಕಣ್ಣುಗಳು ಸರಿಯಾಗಿ ಕಾಣಿಸುತ್ತಿಲ್ಲ. ತನ್ನ ಮಕ್ಕಳು, ಕುಟುಂಬದ ಬಗ್ಗೆ ನೆನಪಿಲ್ಲ. ಎಲ್ಲಿಗೆ ಹೋಗ್ಬೇಕು ಅನ್ನೋದ್ರ ಅರಿವಿಲ್ಲ. ಆದ್ರೆ ಈ ಇಳಿ ವಯಸ್ಸಿನಲ್ಲಿ ತನ್ನ ಸ್ಥಿತಿಯ ಬಗ್ಗೆ ಚನ್ನವ್ವಗೆ ಅಸಹನೆಯಿದೆ. ಹೀಗಾಗಿಯೇ ದಯಾಮರಣಕ್ಕಾಗಿ ವಿನಂತಿ ಮಾಡ್ತಿದ್ದಾರೆ.
ಚನ್ನವ್ವನ ಈ ಸ್ಥಿತಿ ಬೇರಾರಿಗೂ ಬಾರದಿರಲಿ. ಈ ಸುದ್ದಿ ನೋಡಿದ ಬಳಿಕವಾದರೂ ಈ ಹಿರಿಯಜ್ಜಿಯ ಸಂಬಂಧಿಕರು ಜಿಲ್ಲಾಸ್ಪತ್ರೆಯತ್ತ ಮುಖ ಮಾಡ್ಲಿ ಅನ್ನೋದೇ ನಮ್ಮ ಆಶಯ.