ಬೆಂಗಳೂರು: ಹೊಸವರ್ಷದ ಸ್ವಾಗತಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಮಧ್ಯೆ ಭಯೋತ್ಪಾದಕರ ಹಳೆಯ ವಿಡಿಯೋಗಳು ವೈರಲ್ ಆಗಿದ್ದು, ಯಾವುದೇ ಸಮಯದಲ್ಲಿ ಯಾವ ಪ್ರದೇಶದಲ್ಲಿ ಬೇಕಾದ್ರೂ ದಾಳಿ ನಡೆಯಬಹುದು ಅಂತಾ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೆಂಗಳೂರಿನ ಪ್ರಮುಖ ರಸ್ತೆಗಾಳಾದ ಎಂಜಿ ರೋಡ್, ಬ್ರಿಗೇಡ್ ರೋಡ್ಗಳಲ್ಲಿ ಇದೇ ಮೊದಲ ಬಾರಿಗೆ ಪೊಲೀಸರು ಪರೇಡ್ ನಡೆಸ್ತಿದ್ದಾರೆ.
ಪಬ್ಗಳು ಸೇರಿದಂತೆ ಎಲ್ಲಾ ಸಂಭ್ರಮಾಚರಣೆಯ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನು ಇಂದು ರಾತ್ರಿ 2 ಗಂಟೆವರೆಗೆ ಪಬ್ ಮತ್ತು ಬಾರ್ಗಳ ಓಪನ್ಗೆ ಅವಕಾಶ ನೀಡಿದ್ದು, ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ನಲ್ಲಿ ಸಂಜೆ 8 ಗಂಟೆಯ ನಂತ್ರ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ BMTC ವೋಲ್ವೋ ಬಸ್ ಪ್ರಯಾಣಿಕರಿಗೊಂದು ಸಿಹಿಸುದ್ದಿ
ಹೊಸ ವರ್ಷಾಚರಣೆಗೆ ಬರುವ ವಾಹನ ಸವಾರರಿಗೆ, ಕಬ್ಬನ್ ರೋಡ್, ಎಂಜಿ ರೋಡ್, ಬ್ರಿಗೇಡ್ ರೋಡ್ಗಳ ಪಾರ್ಲರ್ ರೋಡ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 9 ಗಂಟೆಯ ನಂತರ ಬಳ್ಳಾರಿ ರೋಡ್ನ ಫ್ಲೈ ಓವರ್ ಹೊರತುಪಡಿಸಿ, ನಗರದ ಎಲ್ಲಾ ಫ್ಲೈಓವರ್ಗಳ ಮೇಲೆ ವಾಹನ ಓಡಾಟ ನಿಷೇಧಿಲಾಗಿದೆ.
ಇನ್ನು ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ಆವಲಬೆಟ್ಟ ಮತ್ತು ಕಬ್ಬನ್ ಪಾರ್ಕ್ನಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಕಬ್ಬನ್ ಪಾರ್ಕ್, ನಂದಿ ಬೆಟ್ಟ ಮತ್ತು ಆವಲಬೆಟ್ಟಕ್ಕೆ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 8 ಗಂಟೆಯವರೆಗೆ ಎಂಟ್ರಿ ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಮಡಿಕೇರಿ, ಮಂಗ್ಳೂರಲ್ಲೂ ಬಿಗಿ ಭದ್ರೆತೆ: ಪ್ರವಾಸಿಗರ ಹಾಟ್ ಫೇವರಿಟ್ ತಾಣ ಮಡಿಕೇರಿಯಲ್ಲೂ ನ್ಯೂ ಇಯರ್ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈಗಾಗಲೇ ಸಾವಿರಾರು ಪ್ರವಾಸಿಗರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ. ಹೋಂ ಸ್ಟೇ ಹಾಗೂ ರೆಸಾರ್ಟ್ಗಳು ಕಂಪ್ಲೀಟ್ ಆಗಿ ಬುಕ್ ಆಗಿವೆ. ಹೊಸ ವರ್ಷದ ಸಂಭ್ರಮದ ಹೆಸರಲ್ಲಿ ಯಾವುದೇ ಹುಚ್ಚಾಟ ನಡೀಬಾರ್ದು ಅನ್ನೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.
ರಾತ್ರಿ 12.30ರ ನಂತ್ರ ಮಡಿಕೇರಿಯಲ್ಲಿ ಎಲ್ಲಿಯೂ ನ್ಯೂಇಯರ್ ಸೆಲಬ್ರೇಷನ್ ಮಾಡುವಂತಿಲ್ಲ. ಅಲ್ಲದೇ ರಸ್ತೆಗಳಲ್ಲಿ ವಿಶ್ ಮಾಡೋ ಹೆಸರಲ್ಲಿ ಯಾರಿಗೂ ತೊಂದರೆ ನೀಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸೆಲಬ್ರೇಷನ್ ಮಾಡುವಂತಿಲ್ಲ. ಮುಖ್ಯವಾಗಿ ಹೋಂಸ್ಟೇಗಳಲ್ಲಿ ಲಿಕ್ಕರ್ ಸಪ್ಲೇ ಮಾಡುವಂತಿಲ್ಲವೆಂದು ಖಡಕ್ ಸೂಚನೆ ನೀಡಿದೆ. ರೆಸಾರ್ಟ್ ಹಾಗೂ ಹೋಂಸ್ಟೇಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲು ಖಾಕಿ ಪಡೆ ನಿಯೋಜಿಸಿದೆ.
ಮಂಗಳೂರಲ್ಲಿ ವರ್ಷಾಚರಣೆ ವೇಳೆ ತಡರಾತ್ರಿ ರೆಸ್ಟೋರೆಂಟ್, ಅಂಗಡಿ ಮುಂಗಟ್ಟುಗಳು ತೆರೆಯದಂತೆ ಪೊಲೀಸ್ ಕಮೀಷನರ್ ಸೂಚಿಸಿದ್ದಾರೆ. ಈ ಮಧ್ಯೆ ತಡರಾತ್ರಿ ರೆಸ್ಟೋರೆಂಟ್ ಓಪನ್ ಇದ್ರೆ ರೇಡ್ ಮಾಡೋದಾಗಿ ಹಿಂದೂ ಸಂಘಟನೆಗಳು ಎಚ್ಚರಿಸಿದೆ.