ಬೆಳಗಾವಿ: ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸರ್ಕಾರದ ಹಗ್ಗಜಗ್ಗಾಟದ ಮಧ್ಯೆ ಜಲ್ಲೆಯ ಹುಕ್ಕೇರಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು ರಾಜೀನಾಮೆಗೆ ಮುಂದಾಗಿದ್ದಾರೆ.
ಡಾ. ನಜ್ಬೀರ್ ದೇಸಾಯಿ ಮತ್ತು ದೀಪಕ್ ಅಂಬಲಿ ಎಂಬವರೇ ರಾಜೀನಾಮೆ ನೀಡಲು ಮುಂದಾದ ವೈದ್ಯರು. ನವೆಂಬರ್ 5ರಂದು ಕೊಟಬಾಗಿ ಗ್ರಾಮದ ನಿವಾಸಿಯಾದ ತಾಯವ್ವ ಕಾಮಶೆಟ್ಟಿ ಎಂಬ 13 ವರ್ಷದ ಬಾಲಕಿ ಅಸ್ತಮ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಚಿಕಿತ್ಸೆಗಾಗಿ ದಾಖಲಾಗಿದ್ದರು. ಎರಡು ದಿನ ಚಿಕಿತ್ಸೆ ನೀಡಿದ ವೈದ್ಯರು 3ನೇ ದಿನಕ್ಕೆ ತಾಯವ್ವನ ಪಾಲಕರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಆದರೆ ಜಿಲ್ಲಾಸ್ಪತ್ರೆಗೆ ಹೋಗುವ ದಾರಿ ಮಧ್ಯದಲ್ಲೇ ತಾಯವ್ವ ಜೀವಬಿಟ್ಟಿದ್ದಳು.
ಕೊನೆಗೆ ಹುಕ್ಕೇರಿ ಆಸ್ಪತ್ರೆ ವೈದ್ಯರೇ ನಮ್ಮ ಮಗಳ ಸಾವಿಗೆ ಕಾರಣ ಅಂತ ತಾಯವ್ವಳ ಪೋಷಕರು ಗಲಾಟೆ ಮಾಡಿ ನಂತರದ ದಿನಗಳಲ್ಲಿ ಸುಮ್ಮನಾದರು. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಅಂತ ಪೋಷಕರು ಆರೋಪಿಸಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲ ನಕಲಿ ಪತ್ರಕರ್ತರು, ಕೆಲವು ಸಂಘಟನೆಯವರು ಈಗಲೂ ವೈದ್ಯರಿಗೆ ತೊಂದರೆ ನೀಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ.
ಮಧ್ಯವರ್ತಿಗಳ ಬೆದರಿಕೆಯಿಂದ ರೋಸಿ ಹೋಗಿ ಈಗ ವೈದ್ಯರು ರಾಜೀನಾಮೆ ನೀಡಿ, ಬೇಡಪ್ಪ ಬೇಡ ಸರ್ಕಾರಿ ಆಸ್ಪತ್ರೆಯ ಸಹವಾಸ ಅಂತಿದ್ದಾರೆ. ಸರ್ಕಾರ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನ ನೇಮಿಸಿ ಜನರ ಸೇವೆ ಮಾಡಿಸುತ್ತಿದೆ. ಹೀಗಿರುವಾಗ ಚಿಕಿತ್ಸೆ ನೀಡುವ ವೈದ್ಯರಿಗೆ ಬೆದರಿಕೆ ಹಾಕಿದ್ರೆ ಜನರ ಕಷ್ಟ ಕೇಳೋರ್ಯಾರು ಅನ್ನೋದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.