ಶಿವಮೊಗ್ಗ: ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಯುವಕನ ಕಾಟಕ್ಕೆ ಬೇಸತ್ತು ಯುವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ವೆಂಕಟೇಶ್ ನಗರದಲ್ಲಿ ನಡೆದಿದೆ.
ಮಲವಗೊಪ್ಪ ಮೂಲದ ಮಂಜಾನಾಯ್ಕ ಎಂಬವರ ಮಗಳು ಚೇತನಾ(19) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಹೊಸಮನೆಯ ಶ್ರೀನಿವಾಸ ಎಂಬಾತ ಚೇತನಾಗೆ ಪ್ರೀತಿ ಮಾಡು ಎಂದು ಬೆನ್ನು ಬಿದ್ದಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶ್ರೀನಿವಾಸನ ಕಾಟಕ್ಕೆ ಮನನೊಂದು ಚೇತನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ. ಚೇತನಾ ಮಾಚೇನಹಳ್ಳಿಯ ಬಿಪಿಒದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಶ್ರೀನಿವಾಸ್ ಲಕ್ಷ್ಮೀ ಚಲನಚಿತ್ರದ ಬಳಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದನು.
ಶ್ರೀನಿವಾಸ್ ಮೂರ್ನಾಲ್ಕು ತಿಂಗಳಿಂದ ಚೇತನಾಳ ಬೆನ್ನುಬಿದ್ದು ಕಿರುಕುಳ ನೀಡುತ್ತಿದ್ದನು. ಆಗ ಚೇತನಾ ಪೋಷಕರು ಆತನನ್ನು ಕರೆಸಿ ಬುದ್ದಿವಾದ ಹೇಳಿದ್ದರು. ಆದರೆ ಶ್ರೀನಿವಾಸ್ ನಿತ್ಯವೂ ಕಿರುಕುಳ ನೀಡುತ್ತಿದ್ದರಿಂದ ಚೇತನಾ ಬೇಸತ್ತು ಶನಿವಾರ ಮಧ್ಯಾಹ್ನ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿಂತೆ ಆರೋಪಿ ಶ್ರೀನಿವಾಸನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.