ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ `ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ’ (ಎಫ್ಆರ್ಡಿಐ) ಜಾರಿಗೆ ತರುವುದಕ್ಕೆ ಮುಂದಾಗಿದ್ದು, ಈ ಮಸೂದೆ ಜಾರಿಯಾದರೆ ಬ್ಯಾಂಕುಗಳ ರಕ್ಷಣೆಯಾಗಲಿದ್ದು, ಜನರ ಹಣಕ್ಕೆ ಮಾತ್ರ ಯಾವುದೇ ರಕ್ಷಣೆ ಇರುವುದಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಗುಂಡೂರಾವ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್ ದಿವಾಳಿಯಾದಾಗ ಬ್ಯಾಂಕ್ ಗಳನ್ನು ರಕ್ಷಿಸುವ ನಿಯಮಗಳನ್ನು ಎಫ್ಆರ್ಡಿಐ ಮಸೂದೆಯಲ್ಲಿ ಜಾರಿಗೆ ಮಾಡಲಾಗುತ್ತಿದೆ. ಈ ಬಿಲ್ ಬ್ಯಾಂಕುಗಳ ರಕ್ಷಣೆಗೆ ಅನುಕೂಲವಾಗಿದೆ. ಆದರೆ ಜನರಿಗೆ ಅನುಕೂಲಕರವಾಗಿಲ್ಲ. ಒಂದು ವೇಳೆ ಮಸೂದೆ ಜಾರಿಗೆ ಆದರೆ ಜನರ ಹಣಕ್ಕೆ ರಕ್ಷಣೆಯಿಲ್ಲ. ಬ್ಯಾಂಕ್ ಗಳಲ್ಲಿಟ್ಟಿರುವ ಹಣಕ್ಕೆ ರಕ್ಷಣೆ ಇಲ್ಲವಾಗುತ್ತದೆ. ಇದು ಜನಸಾಮಾನ್ಯರಿಗೆ ಅಸುರಕ್ಷಿತವಾಗಿದೆ. ಕೇವಲ ಬ್ಯಾಂಕ್ ಮತ್ತು ಕಂಪನಿಗಳಿಗೆ ಅನುಕೂಲಕರವಾಗಿರುವ ಈ ಬಿಲ್ ಜಾರಿ ತರುವುದು ಸರಿಯಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿಕಾರಿದ ಅವರು, ಬ್ಯಾಂಕ್ ವ್ಯವಸ್ಥೆ ಹದಗೆಟ್ಟಿದೆ. ಬ್ಯಾಂಕ್ ಗಳನ್ನು ಬಚಾವ್ ಮಾಡಲು ಕೇಂದ್ರ ಮುಂದಾಗಿದೆ. ಇದಕ್ಕಾಗಿ 2.5 ಲಕ್ಷ ಕೋಟಿ ಲಿಕ್ವಿಡಿಟಿ ಕೇಂದ್ರ ನೀಡಿದೆ. ಅಲ್ಲದೆ ಬೇಲ್ ಔಟ್ ಅನ್ನು ಬೇಲ್ ಇನ್ ಮಾಡಲು ಹೊರಟಿದೆ. ಈ ಕುರಿತ ನಿಯಮಗಳನ್ನು ಎಫ್ಡಿಆರ್ ಐ ಮಸೂದೆಯಲ್ಲಿ ಸೇರಿಸಿದೆ. ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಬ್ಯಾಂಕ್ ಸುಲಭವಾಗಿ ಜಾಮೀನು ಪಡೆಯಬಹುದು. ಮೊದಲು ಜಾಮೀನು ಪಡೆಯಲು ಅವಕಾಶವಿರಲಿಲ್ಲ. ಇದರಿಂದ ಸಣ್ಣ ಠೇವಣಿದಾರರ ಹಣವೂ ವಾಪಸ್ ಬರಲ್ಲ. ಬ್ಯಾಂಕ್ ದಿವಾಳಿಯಾದರೆ ಠೇವಣಿ ಹಣ ವಾಪಸ್ ನೀಡಲ್ಲ. ದಿವಾಳಿ ಎಂದು ತೋರಿಸಿ ಬ್ಯಾಂಕ್ ತಪ್ಪಿಸಿಕೊಳ್ಳಲು ಅವಕಾಶ ಲಭಿಸಿಸುತ್ತದೆ. ಹೀಗಾಗಿ ಈ ಮಸೂದೆ ಜಾರಿಗೆ ತರುವುದು ಸರಿಯಲ್ಲ ಎಂದರು.
ಹಣಕಾಸು ಸಚಿವಾಲಯ ಹೇಳಿದ್ದೇನು?
ದಿವಾಳಿ ಅಂಚಿಗೆ ತಲುಪುವ ಬ್ಯಾಂಕ್ಗಳು ತಮ್ಮ ನಷ್ಟದ ತೀವ್ರತೆ ತಗ್ಗಿಸಲು ಠೇವಣಿದಾರರ ಹಣವನ್ನು ಬಳಸಿಕೊಳ್ಳಲು ಅವಕಾಶ ಇರುವ ಪ್ರಸ್ತಾವವನ್ನು (ಬಿಲ್ ಇನ್) ನಿಯಮವನ್ನು ಎಫ್ಆರ್ಡಿಐ ಮಸೂದೆ ಒಳಗೊಂಡಿದೆ ಎಂಬ ಮಾಧ್ಯಮ ವರದಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಈ ಹಿಂದೆ ಸ್ಪಷ್ಟನೆ ನೀಡಿತ್ತು. ಮಸೂದೆಯೂ ಬ್ಯಾಂಕ್ ಠೇವಣಿದಾರರ ಸ್ನೇಹಿಯಾಗಿದ್ದು, ಠೇವಣಿದಾರರ ಹಿತರಕ್ಷಣೆಗೆ ಧಕ್ಕೆಯಾಗುವ ನಿಯಮಗಳನ್ನು ಬದಲಿಸಿಲ್ಲ. ಹೆಚ್ಚು ಪಾರದರ್ಶಕವಾದ ಮತ್ತು ಹೆಚ್ಚುವರಿ ರಕ್ಷಣೆ ನೀಡುವ ಬಗೆಯಲ್ಲಿ ಈ ನಿಯಮಗಳಿವೆ ಎಂಬ ಭರವಸೆ ನೀಡಿತ್ತು.
ಈ ಮಸೂದೆಯನ್ನು ಆಗಸ್ಟ್ ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಮಸೂದೆಯಲ್ಲಿನ ವಿವಿಧ ಪ್ರಸ್ತಾವನೆಗಳ ಬಗ್ಗೆ ಸಮಿತಿಯು ಎಲ್ಲ ಭಾಗಿದಾರರ ಜತೆ ಚರ್ಚೆ ನಡೆಸುತ್ತಿದೆ. ದೇಶಿ ಬ್ಯಾಂಕ್ಗಳು ಅಗತ್ಯ ಇರುವಷ್ಟು ಬಂಡವಾಳ ಹೊಂದಿವೆ. ಅಲ್ಲದೇ ನಿಯಂತ್ರಣ ಮತ್ತು ಮೇಲ್ವಿಚಾರಣೆಗೂ ಒಳಪಟ್ಟಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಥಿರತೆಯೂ ಇದೆ ಎಂದು ಸಚಿವಾಲಯ ತಿಳಿಸಿತ್ತು.
ಬಿಲ್ ಇನ್ ನಿಯಮ: ಬ್ಯಾಂಕ್ ನಲ್ಲಿ ಠೇವಣಿ ಇಡುವ ಗ್ರಾಹಕರ 1 ಲಕ್ಷ ರು ವರೆಗಿನ ಠೇವಣಿಗೆ ಸರ್ಕಾರದ ಖಾತರಿ ನೀಡಿತ್ತು. ಅಂದರೆ ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಸರ್ಕಾರ ಈ ಜವಾಬ್ದಾರಿಯನ್ನು ನಿರ್ವಹಿಸುತಿತ್ತು. ಆದರೆ ಮಸೂದೆಯಲ್ಲಿ ಈ ನಿಯಮ ತೆಗೆದು ಹಾಕಲಾಗಿದೆ ಎನ್ನಲಾಗಿದೆ ವರದಿ ಹಿನ್ನೆಲೆಯಲ್ಲಿ ಈ ಆರೋಪ ಈಗ ಕೇಳಿ ಬರುತ್ತಿದೆ.
ಸರ್ಕಾರದ ಠೇವಣಿ ಹೊಣೆಗಾರಿಕೆ ನೋಡಿಕೊಳ್ಳಲು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವನ್ನು 1960ರ ಮುಂಚೆಯೇ ಸ್ಥಾಪಿಸಲಾಗಿದೆ. ಸರ್ಕಾರದ ಖಾತರಿಗೆ ಒಳಪಡುವ ಠೇವಣಿ ಮೊತ್ತ ಹೆಚ್ಚಿಸಲು ಒತ್ತಾಯಿಸಿದ್ದರೂ ಈ ಸಮಿತಿಯನ್ನು 1993 ರಿಂದ ಇದುವರೆಗೂ ಒಮ್ಮೆಯೂ ಪರಿಷ್ಕರಿಸಿಲ್ಲ.