ಮೈಸೂರು: ಮುಂದಿನ ಚುನಾವಣೆಯಲ್ಲಿ ಮಗನಿಗಾಗಿ ಕ್ಷೇತ್ರ ಬದಲಾಯಿಸುವ ನಿರ್ಧಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದು ನಿಶ್ಚಿತವಾಗಿದೆ. ಹೀಗಾಗಿ ಅವರನ್ನು ಸೋಲಿಸಲು ಜೆಡಿಎಸ್ – ಬಿಜೆಪಿ ಪರಸ್ಪರ ಜೊತೆಯಾಗುತ್ತಿವೆ. ಇನ್ನೊಂದು ಕಡೆ ಸಿಎಂ ಪುತ್ರ ಡಾ. ಯತೀಂದ್ರ ಸ್ಪರ್ಧಿಸಲಿರುವ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಶಂಕರ್ ಬಿದರಿ ಸ್ಪರ್ಧಿಸುವ ಸಾಧ್ಯತೆ ಇದೆ.
ಸಿಎಂ ಪುತ್ರನ ವಿರುದ್ಧ ಲಿಂಗಾಯಿತ ಸಮುದಾಯದ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಜ್ಜಾಗಿದೆ. ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರು ಆಗಿರುವ ಶಂಕರ್ ಬಿದರಿ ಹಗೂ ಈಗಾಗಲೇ ಸಿಎಂ ವಿರುದ್ಧ ಸ್ಪರ್ಧಿಸಿ ಸೋತಿರುವ ಕಾ.ಪು. ಸಿದ್ದಲಿಂಗ ಸ್ವಾಮಿ ಸಹ ವರುಣಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಮತಗಳು ನಿರ್ಣಾಯಕ ಮಟ್ಟದಲ್ಲಿವೆ. ಈ ಹಿನ್ನೆಯಲ್ಲಿ ಲಿಂಗಾಯತ ನಾಯಕರು ಹಾಗೂ ವೃತ್ತಿಯಲ್ಲಿ ಇದ್ದಾಗ ಖ್ಯಾತಿ ಗಳಿಸಿರುವ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಕಳೆದ ಬಾರಿ ಕ್ಷೇತ್ರದಲ್ಲಿ ಸೋತಿರುವ ಕಾ.ಪು. ಸಿದ್ದಲಿಂಗಸ್ವಾಮಿ ಅವರಿಗೆ ಸ್ಥಳೀಯ ಬಿಜೆಪಿ ವಲಯದಲ್ಲೇ ದೊಡ್ಡ ವಿರೋಧವಿದೆ. ಅಲ್ಲದೆ ಸ್ಥಳೀಯ ಜನರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಂಕರ ಬಿದರಿ ಸ್ಪರ್ಧೆ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದೆ ಎಂದು ಹೇಳಲಾಗ್ತಿದೆ.