ಶಿವಮೊಗ್ಗ: ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವಾಮಮಾರ್ಗದಿಂದ ಬಿಜೆಪಿ ಜಯಗಳಿಸಿದೆ ಎಂದು ಶಾಸಕ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೋಟ್ ನಿಷೇಧಗೊಳಿಸಿ ಬೇರೆ ಪಕ್ಷಗಳಿಗೆ ಸಂಪನ್ಮೂಲ ಸಿಗದಂತೆ ಮಾಡಿದ್ದಾರೆ. ಅಧಿಕಾರ ದುರ್ಬಳಕೆ ಕೊಂಡು ಮೇಲುಗೈ ಸಾಧಿಸಿದ್ದಾರೆ ಎಂದು ಉಗ್ರಪ್ಪ ದೂರಿದರು.
ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬ ಹೇಳಿಕೆಗೆ ಜನತೆ ಇಂದು ತಕ್ಕ ಉತ್ತರ ನೀಡಿದ್ದಾರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಗೋವಾದಲ್ಲಿ ಅತೀ ಹೆಚ್ಚು ಸ್ಥಾನಗಳಿಸಿದೆ ಎಂದರು. ಲೋಕಸಭಾ ಚುನಾವಣಾ ವೇಳೆ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಮೂರು ವರ್ಷ ಅವಧಿಯಲ್ಲಿ ಬಡವನ ಖಾತೆಗೆ ಮೂರು ಪೈಸೆಯನ್ನೂ ಹಾಕಿಲ್ಲ. ದೇಶದಲ್ಲಿ ಸಾಮರಸ್ಯ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ಈಗ ತಾತ್ಕಾಲಿಕವಾಗಿ ಗೆಲುವು ಗಳಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ಮೋದಿ ಮುಕ್ತ ಭಾರತ ನಿರ್ಮಾಣ ಮಾಡಲಿದ್ದಾರೆ. ಕೊನೆ ಕ್ಷಣದಲ್ಲಿ ಸೆಕ್ಯೂಲರ್ ಫೋರ್ಸ್ ಗಳು ಒಂದಾಗುವಲ್ಲಿ ಆದ ಗೊಂದಲವೂ ಬಿಜೆಪಿ ಗೆಲವಿಗೆ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸೆಕ್ಯೂಲರ್ ಫೋರ್ಸ್ ಗಳ ಒಂದಾಗಲಿವೆ. ಇದರ ನೇತೃತ್ವವನ್ನು ಕಾಂಗ್ರೆಸ್ ವಹಿಸಲಿದೆ ಎಂದರು.