ಕೊಪ್ಪಳ: ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ನಡೆದಿದೆ.
ನೀರು ಪಾಲಾದವರನ್ನು ರಾಘವೇಂದ್ರ (30) ಪವಿತ್ರಾ (14), ಪಾವನಿ(12), ಪೌರ್ಣಿಕಾ ಹಾಗೂ ಆಶಿಸ್ (14) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹೈದರಾಬಾದ್ ಮೂಲದವರು ಎನ್ನಲಾಗಿದೆ.
ಒಟ್ಟು ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಈಜಲು ತೆರಳಿದ್ರು. ನಿನ್ನೆ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಇವರು ಕೆರೆಯಲ್ಲಿ ಈಜಲು ಹೋದಾಗ ಈ ದುರಂತ ನಡೆದಿದೆ. ಘಟನೆಯ ಬಳಿಕ ಇದೀಗ ಓರ್ವನ ಶವ ಪತ್ತೆಯಾಗಿದ್ದು, ಇನ್ನುಳಿದವರ ಮೃತ ದೇಹ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.