ಉಡುಪಿ: ಮೀನುಗಾರಿಕಾ ಸಚಿವರ ಕ್ಷೇತ್ರದಲ್ಲೇ ಇಂದು ಮೀನುಗಾರರು ಸಿಡಿದೆದ್ದಿದ್ದಾರೆ. ಉಡುಪಿಯ ಮಲ್ಪೆಯಲ್ಲಿರುವ ಮೀನುಗಾರಿಕಾ ಇಲಾಖೆ ಕಚೇರಿಗೆ ಬೀಗ ಜಡಿದು ಅಧಿಕಾರಿಗಳು ಕಚೇರಿ ಪ್ರವೇಶ ಮಾಡದಂತೆ ಮೀನುಗಾರರು ಮುತ್ತಿಗೆ ಹಾಕಿದ್ದಾರೆ.
ಹೌದು. ಈ ತರ ಜನ ಜಮಾಯಿಸಿ ಪ್ರತಿಭಟನೆ ನಡೆದದ್ದು ಲೈಟ್ ಫಿಶಿಂಗ್ ವಿರುದ್ಧ. ಅರಬ್ಬೀ ಸಮುದ್ರದಲ್ಲಿ ರಾತ್ರಿ ವೇಳೆ ಭಾರೀ ವೋಲ್ಟೇಜ್ ಲೈಕ್ ಹಾಕಿ ಮೀನುಗಾರಿಕೆ ಮಾಡ್ತಾರೆ. ಲೈಟ್ ಪ್ರಖರತೆಗೆ ಮೀನುಗಳು ಮೇಲೆ ಬರುತ್ತದೆ. ಅದನ್ನು ಮೀನುಗಾರರು ಬಲೆ ಬೀಸಿ ಹಿಡಿಯುತ್ತಾರೆ. ಇದರಿಂದ ಸಮುದ್ರದಲ್ಲಿ ಮೀನಿನ ಸಂತತಿ ನಾಶವಾಗುತ್ತಾ ಬಂದಿದೆ. ಇದರ ವಿರುದ್ಧ ಡೀಪ್ ಸೀ ಬೋಟ್ ಚಾಲಕ- ಮಾಲೀಕರ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮೀನುಗಾರಿಕಾ ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲುಪಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲೈಟ್ ಫಿಶಿಂಗ್ ಗೆ ಬೆಂಗಾವಲಾಗಿದ್ದ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದ ಪ್ರತಿಭಟನಾಕಾರರು ಸಚಿವ ಅವರ ಆಜ್ಞೆಯಂತೆ ಎಲ್ಲ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರ್ಸಿನ್ ಬೋಟ್ ಮೀನುಗಾರರು ಲೈಟ್ ಹಾಕಿ ಫಿಶಿಂಗ್ ಮಾಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಅಸ್ಸಾಮ್, ಕೇರಳ, ಗೋವಾ ಮೀನುಗಾರರು ಕರಾವಳಿ ಕಾರ್ಮಿಕರಾಗಿ ಬಂದು ಇಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಕುಲಗೆಡಿಸಿದ್ದಾರೆ ಎಂಂದು ಮಲ್ಪೆ ಮೀನುಗಾರರು ಆರೋಪಿಸಿದ್ದಾರೆ.
ಇನ್ನು ಡೀಪ್ ಸೀ ಫಿಶಿಂಗ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಚಿವರು ಮೀನುಗಾರರ ಒಗ್ಗಟ್ಟು ಒಡೆದಿದ್ದಾರೆ. ಪರ್ಸಿನ್ ಮೀನುಗಾರರು ಮಾತ್ರ ಮೀನುಗಾರರು ಅಂತ ನಿರ್ಧರಿಸಿದಂತಿದೆ. ಕೇವಲ 10% ಜನರಿಗೆ ಇದರಿಂದ ಉಪಯೋಗವಿದೆ. ಸಾಂಪ್ರದಾಯಿಕ ಮೀನುಗಾರರಿಗೆ ಕಸುಬು ಇಲ್ಲದಂತಾಗಿದೆ. ನಾವು ಮಾಧ್ಯಮದ ಮುಂದೆ ಬಂದು ಸಮಸ್ಯೆ ಹೇಳಿಕೊಂಡ್ರೆ, ನಮ್ಮನ್ನು ಮೀನುಗಾರರೇ ಅಲ್ಲ ಅಂತ ಆರೋಪಿಸ್ತಾರೆ. ನಮಗೆ ರಾಜಕೀಯ ಬೇಡ. ರಾಜಕಾರಣಕ್ಕೂ ಬರುವ ಅವಶ್ಯತಕೆಯಿಲ್ಲ. ಸಮಸ್ಯೆ ಬಗೆಹರಿಸಿ ಅಂತ ಮನವಿಗಳ ಮೇಲೆ ಮನವಿ ಕೊಡ್ತಾಯಿದ್ದರೆ, ಸಚಿವರು ಲೈಟ್ ಫಿಶಿಂಗ್ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶಗೊಂಡಿದ್ದಾರೆ.