ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟದ ಅರಣ್ಯಕ್ಕೆ ಬಿದ್ದ ಬೆಂಕಿ ಆರಿಸುತ್ತಿರುವ ಅಗ್ನಿ ಶಾಮಕ ಮತ್ತು ಅರಣ್ಯ ಸಿಬ್ಬಂದಿಗೆ ಆಹಾರ ಮತ್ತು ಕುಡಿಯುವ ನೀರು ಸಿಗದೇ ಪರದಾಡುತ್ತಿದ್ದಾರೆ.
ಗುರುವಾರ ಸಂಜೆ ಬಿಳಿಗಿರಿ ರಂಗನಬೆಟ್ಟದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ಬಾರದೇ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ನೂರಾರು ಅರಣ್ಯ ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ಹಗಲು-ರಾತ್ರಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆಗೆ ಗಾಳಿ ಅಡ್ಡಿಯಾಗಿದೆ. ಪುಣಜೂರು, ಬೆಡಗುಳಿ ಅರಣ್ಯ ಪ್ರದೇಶ, ತಮಿಳುನಾಡು ಗಡಿಯ ಹಾಸನೂರು ಭಾಗದಲ್ಲಿಯೂ ಬೆಂಕಿ ಹರಡಿಕೊಂಡಿದೆ. ಕಡಿದಾದ ಬೆಟ್ಟ, ಗುಡ್ಡಗಳಿಂದ ಕಾರ್ಯಚರಣೆಗೆ ತೊಡಕು ಉಂಟಾಗಿದೆ.