ಬಾಗಲಕೋಟೆ: ಕಸದ ಮುಸುರಿ ಚೆಲ್ಲುವ ವಿಷಯಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕಟಗಿನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಡವಾಗಿ ಬೆಳಕಿಗೆ ಬಂದ ಈ ಘಟನೆಯಲ್ಲಿ ಮೂಶೆಪ್ಪ ವಿಗ್ನೇಶಪ್ಪ ಗೌಡರ (60) ಮೃತಪಟ್ಟಿದ್ದಾರೆ. ಕಳೆದ ಶುಕ್ರವಾರ ರಾತ್ರಿ ಮೃತ ಮೂಶೆಪ್ಪ ಅದೇ ಗ್ರಾಮದ ಧಾಮಸಪ್ಪ ಗೌಡ ಹಾಗೂ ಚವರಪ್ಪ ಗೌಡ ನಡುವೆ ಕಸದ ಮುಸುರಿ ಚೆಲ್ಲುವ ವಿಚಾರದಲ್ಲಿ ಜಗಳವಾಗಿದೆ.
ಜಗಳ ಕೈ ಕೈ ಮಿಲಾಯಿಸುವ ಹಂತ ತಲುಪಿ, ವಿಕೋಪಕ್ಕೆ ತಿರುಗಿದ ಪರಿಣಾಮ ಗಲಾಟೆಯಲ್ಲಿ ಮೂಶೆಪ್ಪ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅವರು ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಮಸಪ್ಪ ಹಾಗೂ ಚವರಪ್ಪ ಎಂಬವರನ್ನು ಬಂಧಿಸಿ, ತನಿಖೆಗೆ ಒಳಪಡಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಪಿಎಸ್ಐ ಬಸವರಾಜ ಲಮಾಣಿ ತಿಳಿಸಿದ್ದಾರೆ.