– ಯುವತಿಯ ಕೈಯನ್ನು ಮುಳ್ಳಿನ ಪಾದುಕೆ ಮೇಲಿಟ್ಟು ತುಳಿದ ಪೂಜಾರಿ
ಬೆಂಗಳೂರು: ಮನುಕುಲವೇ ತಲೆ ತಗ್ಗಿಸುವ ಹೀನ ಕೃತ್ಯವಿದು. ಹೆತ್ತ ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಮಗಳ ಮೇಲೆ ಅತ್ಯಾಚಾರವಾಗಿದೆಯೋ ಇಲ್ಲವೋ ಎಂದು ತಿಳಿಯಲು ಮೌಢ್ಯತೆಯ ಮೊರೆ ಹೋದ ತಾಯಿಗೆ ಸಿಕ್ಕಿದ್ದು ಪೂಜಾರಿಯಿಂದ ಚಿತ್ರಹಿಂಸೆ.
ಮಾಗಡಿ ಬಳಿಯ ಅಜ್ಜನಹಳ್ಳಿ ಮೂಲದ ರಮೇಶ್ ಎಂಬಾತ ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿ. ಇವರ ಕುಟುಂಬ ಕೆಲಸಕ್ಕೆಂದು ಬೆಂಗಳೂರಿಗೆ ಬರುತಿದ್ರು. ಈ ವೇಳೆ ರಮೇಶ್ ತನ್ನ ಹೆತ್ತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರವೆಸಗಿ ಈ ವಿಷಯ ತಾಯಿಗೆ ತಿಳಿಸಿದರೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ತಾಯಿ ಮೇಲಿನ ಪ್ರೀತಿಗೆ ಕಟ್ಟುಬಿದ್ದಿದ್ದ ಆ ಹೆಣ್ಣುಮಗಳು ತಂದೆಯ ಅನಾಚಾರವನ್ನ ಸಹಿಸಿಕೊಂಡಿದ್ಲು. ಆದ್ರೆ ಯಾವಾಗ ರಮೇಶ ವಿಕೃತಿ ಮೆರೆದನೋ ಇಡೀ ಘಟನೆಯನ್ನ ತನ್ನ ಕುಟುಂಬದವರಿಗೆ ತಿಳಿಸಿದ್ದಾಳೆ.
ಆದ್ರೆ ತಾಯಿ ಪೊಲೀಸರಿಗೆ ದೂರು ನೀಡದೇ ಪೂಜೆ, ಪುನಸ್ಕಾರ ಅಂತ ಪೂಜಾರಿಯ ಮೊರೆ ಹೋಗಿದ್ದಾರೆ. ತನ್ನ ಮಗಳನ್ನು ಲಗ್ಗೆರೆಯ ಚೌಡೇಶ್ವರಿನಗರದಲ್ಲಿರುವ ಸೋದರಿಯ ಮನೆಗೆ ಕರೆತಂದು ಸ್ಥಳೀಯ ಪೂಜಾರಿ ಮಲ್ಲೇಶ್ ಮತ್ತು ಮಲ್ಲೇಶನ ತಾಯಿಯ ಬಳಿ ಕರೆದುಕೊಂಡು ಹೋಗಿದ್ದಾರೆ.
ಪೂಜಾರಿ ಮಲ್ಲೇಶ್ ಮತ್ತು ಮಲ್ಲೇಶ್ನ ತಾಯಿ ಮಗಳ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಲು ನೊಂದ ಯುವತಿಯ ಕೈಯನ್ನು ಮುಳ್ಳಿನ ಪಾದುಕೆ ಮೇಲಿಟ್ಟು ತುಳಿದಿದ್ದಾರೆ. ತುಳಿದ ನಂತರ ಯುವತಿ ಕೈಯಲ್ಲಿ ರಕ್ತ ಬಂದರೆ ಅತ್ಯಾಚಾರ ಆಗಿಲ್ಲ. ರಕ್ತ ಬರದೇ ಇದ್ದರೆ ಅತ್ಯಾಚಾರ ಆಗಿದೆ ಎಂದು ನಂಬಿಸಿ ಪೋಷಕರ ಎದುರೇ ಚಿತ್ರಹಿಂಸೆ ನೀಡಿದ್ದಾರೆ. ನಂತರ ನೆರೆಹೊರೆಯವರಿಂದ ವಿಷಯ ತಿಳಿದ ಸ್ಥಳೀಯರು ಕಾಮುಕ ತಂದೆ ರಮೇಶ್, ಪೂಜಾರಿ ಮಲ್ಲೇಶ್ ಹಾಗೂ ತಾಯಿಯನ್ನು ಹಿಡಿದು ರಾಜಗೋಪಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ರಾಜಗೋಪಾಲ್ ನಗರ ಪೊಲೀಸರು ಮಲ್ಲೇಶ್ ಮತ್ತು ರಮೇಶ್ನನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.