ಚಿಕ್ಕಮಗಳೂರು: `ಮೂರು ಬಾರಿ ಶಾಸಕ, ಒಮ್ಮೆ ಮಂತ್ರಿಯಾಗಿದ್ದೀಯಾ. ಆದ್ರೂ ನಿನ್ನ ಕೊಡುಗೆ ಶೂನ್ಯ. ಚಿಕ್ಕ ಚಿಕ್ಕ ಯೋಜನೆಗಳನ್ನೂ ಮುಗಿಸಿಲ್ಲ. ಚುನಾವಣೆ ಸಂದರ್ಭ ಗ್ರಾಮವಾಸ್ತವ್ಯ, ಕಬ್ಬಡಿ, ಡ್ಯಾನ್ಸ್ ಮಾಡೋ ಗಿಮಿಕ್ ಮಾಡೋದ್ರಲ್ಲಿ ನೀನು ನಿಸ್ಸೀಮ. ನಿನ್ನ ಕೈಲಿ ಆಗದಿದ್ರೆ ಕ್ಷೇತ್ರ ಬಿಟ್ಟು ಹೋಗು’ ಅಂತ ಶಾಸಕ ಸಿಟಿ ರವಿಯವರನ್ನು ಚಿಕ್ಕಮಗಳೂರಿನ ಮತದಾರರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಕಾರಣ ಬೆಳವಾಡಿ, ಕಳಸಾಪುರ, ಲಕ್ಯಾ, ದೇವನೂರು ಭಾಗದ 60-70 ಹಳ್ಳಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ಕರಗಡ ಯೋಜನೆ ಪ್ರಾರಂಭಿಸಲಾಗಿತ್ತು. ಆದ್ರೆ ಇದನ್ನ ಮುಗಿಸದ ಕಾರಣ ಶಾಸಕ ರವಿಯನ್ನ ಮುಂದಿನ ಎಲೆಕ್ಷನ್ನಲ್ಲಿ ಸೋಲಿಸಬೇಕು ಅಂತಾ ಮತದಾರರು ಪಣ ತೊಟ್ಟಿರುವುದಾಗಿ ಕರಗಡ ನೀರಾವರಿ ಹೋರಾಟ ಸಮಿತಿ ಸಂಚಾಲಕ ರವೀಶ್ ಕ್ಯಾತನಬೀಡು ಹೇಳಿದ್ದಾರೆ.
ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!
`ಶಾಸಕ ಸಿ.ಟಿ. ರವಿಯನ್ನ ಸೋಲಿಸಿ’ ಎಂಬ ಸ್ಲೋಗನ್ ಅಡಿ ಊರೂರು ಪ್ರಚಾರ ಮಾಡೋಕೆ ರೈತರು, ಕರಗಡ ಹೋರಾಟ ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ. ಈಗಾಗಲೇ ಐದಾರು ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಶಾಸಕ ಸಿ.ಟಿ. ರವಿ ಈ ಹಿಂದೆ ಕರಗಡ ಯೋಜನೆ ಶೀಘ್ರದಲ್ಲೇ ಮುಗಿಸ್ತೀವಿ ಅಂತಾ ಹೇಳಿ ಮಣ್ಣು ಅಗೆಯೋ ಕೆಲಸ ಮಾಡಿದ್ರು. ಆದ್ರೆ ಇದು ಬರೀ ಪೋಸ್ ಕೊಡಲಷ್ಟೇ ಅನ್ನೋದು ರೈತರ ಆರೋಪ.
ಒಟ್ಟಿನಲ್ಲಿ ಕರಗಡ ನೀರಾವರಿ ಹೋರಾಟ ಸಮಿತಿ ಸಿಟಿ ರವಿ ವಿರುದ್ಧ ತಾಲೂಕಿನಾದ್ಯಂತ ಜನಜಾಗೃತಿ ಮೂಡಿಸಲು ಮುಂದಾಗಿದೆ.
ಇದನ್ನೂ ಓದಿ: ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!