ರಾಮನಗರ: ಜಮೀನಿನಲ್ಲಿ ದನ ಮೇಯಿಸಲು ಹೋಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದಲ್ಲಿ ನಡೆದಿದೆ.
ಕಲ್ಯಾ ಗ್ರಾಮದ ನಿವಾಸಿ ಚಂದ್ರಪ್ಪ (55) ವಿದ್ಯುತ್ ತಂತಿ ಸ್ಪರ್ಶದಿಂದ ಸಾವನ್ನಪ್ಪಿದ ರೈತ. ಬೆಳಿಗ್ಗೆ ದನ ಮೇಯಿಸಲು ತಮ್ಮ ಜಮೀನಿಗೆ ತೆರಳಿದ್ದ ಚಂದ್ರಪ್ಪ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ಗಮನಿಸದೇ ಅದರ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ವಿದ್ಯುತ್ ತಂತಿ ತುಂಡಾಗಿ ಹಲವು ದಿನಗಳೇ ಕಳೆದಿದ್ವು. ಈ ಬಗ್ಗೆ ಬೆಸ್ಕಾಂ ಗೆ ದೂರು ಕೂಡಾ ನೀಡಿದ್ವಿ. ಆದ್ರೆ ಬೆಸ್ಕಾಂ ಅಧಿಕಾರಿಗಳು ತುಂಡಾಗಿದ್ದ ತಂತಿಯನ್ನು ಸರಿಪಡಿಸುವುದಿರಲಿ ಸ್ಥಳಕ್ಕೆ ಭೇಟಿಯನ್ನೂ ಸಹ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ರು.
ಘಟನೆ ಸಂಬಂಧ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.