ಯಾದಗಿರಿ: ಮುಖ್ಯ ಪೇದೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದಕ್ಕೆ ಮನನೊಂದು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ರಾತ್ರಿ ಹಾಲಗೇರಿ ಗ್ರಾಮದಲ್ಲಿ ಜಮೀನು ಪಕ್ಕದಲ್ಲಿ ಮರಳು ಸಂಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಡಗೇರಾ ಠಾಣೆಯ ಮುಖ್ಯ ಪೇದೆ ರೈತರಾದ ಯಂಕಯ್ಯ ಅವರನ್ನು ನಿಂದಿಸಿ ಥಳಿಸಿದ್ದರು.
ಇದರಿಂದ ಮನನೊಂದಿದ್ದ ಯಂಕಯ್ಯ ಅವರು ರಾತ್ರಿ ಜಮೀನಿನಲ್ಲಿ ಉಳಿದುಕೊಂಡು ಬೆಳಗ್ಗೆ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಪರಿಣಾಮ ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಈಗ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ರವಾನಿಸಲಾಗಿದೆ. ವಡಗೇರಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ನಾವು ಯಂಕಯ್ಯನವರಿಗೆ ಯಾವುದೇ ನಿಂದನೆ ಹಾಗೂ ಥಳಿಸುವ ಕೆಲಸ ಮಾಡಿಲ್ಲವೆಂದು ಎಂದು ಹೇಳಿ ಪೊಲೀಸರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.