ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿರೋದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ದರ್ಶನ್ ಅಭಿಮಾನಿ, ಮೆಜೆಸ್ಟೆಕ್, ಕರಿಯಾ, ಇಂದ್ರ ಎಲ್ಲಾ ಸಿನಿಮಾ ನೋಡಿದ್ದೀನಿ. ಅವರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಕಮೆಂಟ್ ಮಾಡಬಾರದು. ಮಾತನಾಡಿದ್ರೆ ಅಭಿಮಾನಿಗಳು ಸುಮ್ಮನಿರಲ್ಲಾ. ಸ್ಟ್ರೈಕ್ ಮಾಡ್ತೀವಿ. ಅವರಿಬ್ಬರೂ ಒಟ್ಟಿಗೆ ಬೆಳೆಯಬೇಕು. ಕನ್ನಡ ಇಂಡಸ್ಟ್ರಿ ನ ಬೆಳೆಸಬೇಕು. ದರ್ಶನ್ಗೋಸ್ಕರ ಪ್ರಾಣ ಬೇಕಾದ್ರೂ ಕೊಡ್ತೀವಿ ಅಂತ ನಂದೀಶ್ ಎಂಬ ಅಭಿಮಾನಿಯೊಬ್ಬರು ಹೇಳಿದ್ದಾರೆ.
ಪ್ರತಿ ಸಾರಿ ಕನ್ನಡ ಫಿಲಂ ರಿಲೀಸ್ ಆದಾಗಲೂ ನಾವು ಹೀರೋಗಳ ಮುಖ ನೋಡಿಕೊಂಡು ಫಿಲಂ ನೋಡಲ್ಲ. ಕನ್ನಡ ಸಿನಿಮಾ ಉದ್ಯಮ ಬೆಳೆಯಬೇಕು ಎಂಬ ಭಾವನೆಯಿಂದ ಫಿಲಂ ನೋಡ್ತೇವೆ. ದರ್ಶನ್ ಸುದೀಪ್ ಮಧ್ಯೆ ಏನೇ ವೈಮನಸ್ಯ ಇದ್ರೂ ಅವರು ಮರೆಯಬೇಕು. ಕನ್ನಡ ಇಂಡಸ್ಟ್ರಿಗೆ ಕೆಟ್ಟ ಹೆಸರು ತರುವ ಬದಲು ಕನ್ನಡ ಇಂಡಸ್ಟ್ರಿ ಬೆಳೆಸುವ ಕಡೆ ಗಮನ ಹರಿಸಬೇಕು. ಸ್ನೇಹ ಅಂದ್ಮೇಲೆ ಸಣ್ಣ ಪುಟ್ಟ ಜಗಳ ಕಾಮನ್. ವಿರಸ ಇದ್ದೇ ಇರುತ್ತೆ. ಅದನ್ನೆಲ್ಲ ಮರೆಯಬೇಕು ಎಂದು ಕೇಳಿಕೊಳ್ಳುತ್ತೇವೆ. ಪ್ರತಿ ಸಿನಿಮಾ ರಿಲೀಸ್ ಆದಾಗಲೂ ನಾವು ನೋಡ್ತೇವೆ. ನಾವು ಕನ್ನಡ ಅಭಿಮಾನಿಗಳು. ಕನ್ನಡ ಸಿನಿಮಾ ಯಾವುದೇ ರಿಲೀಸ್ ಆದ್ರೂ ನೋಡ್ತೇವೆ. ಇವರಿಬ್ಬರ ಸ್ನೇಹ ಎಲ್ಲಾ ಯುವಕರಿಗೆ ಪ್ರೇರಣೆ. ಹಾಗಿದ್ದವರು ಅದೇ ರೀತಿ ಮತ್ತೆ ಸ್ನೇಹವನ್ನು ಮುಂದುವರಿಸಬೇಕು ಅಂತ ಮತ್ತೊಬ್ಬ ಅಭಿಮಾನಿ ನಂದನ್ ಹೇಳಿದ್ದಾರೆ.
ಕನ್ನಡ ಚಲನಚಿತ್ರ ರಂಗದ ನಟರಾದ ದರ್ಶನ್ ಹಾಗೂ ಕಿಚ್ಚ ಸುದೀಪ್ ದೋಸ್ತಿಯ ಬ್ರೆಕ್ ವಿಚಾರದ ಬಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ದರ್ಶನ್ ಅಭಿಮಾನಿಗಳಿಗೆ ಒಂದು ರೀತಿ ಆತಂಕ ಮೂಡಿದೆ. ದರ್ಶನ್ ಹಾಗೂ ಸುದೀಪ್ ನಡುವಿನ ದೋಸ್ತಿ ಕೊನೆಯವರೆಗೂ ಚೆನ್ನಾಗಿರಬೇಕು. ಇಬ್ಬರು ನಟರು ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ದರ್ಶನ್ ಹಾಗೂ ಸುದೀಪ್ ನಡುವಿನ ದೊಸ್ತಿ ಮುರಿದು ಬೀಳಬಾರದು. ಅವರ ನಡುವಿನ ಸ್ನೇಹ ಗಟ್ಟಿಯಾಗಬೇಕು. ಎರಡು ದೇಹ ಒಂದೇ ಮನಸ್ಸುಳ್ಳವರಾಗಿ ಕನ್ನಡ ಚಿತ್ರರಂಗವನ್ನು ಮುನ್ನೆಡಿಸಿಕೊಂಡು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಗದಗನಲ್ಲಿ ಸುದೀಪ್ ಅಭಿಮಾನಿಗಳು ಎಂದು ಹೇಳಿದರು.
ಇಬ್ಬರು ನಟರ ನಡುವಿನ ಮನಸ್ತಾಪ ಶೀಘ್ರವಾಗಿ ದೂರವಾಗಲಿ. ಇಬ್ಬರ ಜಗಳದಿಂದ ಕನ್ನಡ ಫಿಲಂ ಇಂಡಸ್ಟ್ರಿಗೆ ನಷ್ಟವಾಗುತ್ತದೆ. ಸುದೀಪ್ ಮತ್ತು ದರ್ಶನ್ ತಮ್ಮ ಜಗಳ ಮರೆತು ಮತ್ತೆ ಒಂದಾಗಬೇಕು ಎಂದು ಉಡುಪಿಯಲ್ಲಿ ಅಭಿಮಾನಿಗಳು ತಿಳಿಸಿದ್ದಾರೆ.
ಭಾನುವಾರ ಅಭಿಮಾನಿಯೊಬ್ರು ಸುದೀಪ್ಗೆ ಟ್ವೀಟರ್ನಲ್ಲಿ ನೀವು ಮತ್ತು ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತುಂಬಾ ದಿನಗಳಾಗಿವೆ. ನಿಮ್ಮಿಬ್ಬರನ್ನ ಮತ್ತೆ ಒಟ್ಟಾಗಿ ನೋಡಲು ಬಯಸುತ್ತೇವೆ ಅಂತ ಟ್ವೀಟ್ ಮಾಡಿದ್ದರು. ಇದಕ್ಕೆ ಸುದೀಪ್ ಹೆಚ್ಚಿಗೆ ಏನೂ ಹೇಳದೆ ಸ್ಮೈಲಿ ಕೊಟ್ಟಿದ್ದಾರೆ.