ಚಂಡೀಗಢ: ಸಾಮಾಜಿಕ ಜಾಲತಾಣದಲ್ಲಿ ಆಧಾರವಿಲ್ಲದೇ ಯಾವುದೇ ಫೋಟೋಗಳಿಗೆ ಯಾವುದೋ ಶೀರ್ಷಿಕೆ ನೀಡಿ ಹಂಚಿಕೊಳ್ಳುವ ಮಂದಿ ಬಿಸಿ ಮುಟ್ಟಿಸಲು ಈಗ ಸಂಸ್ಥೆಗಳು ಮಂದಾಗಿವೆ.
ಹೌದು. ಕೆಲ ದಿನಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆಗೆ ವಿಮಾನ ಹಾರಾಟ ಸ್ಥಗಿತಗೊಂಡಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿತ್ತು. ಈಗ ಚಂಡೀಗಢ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು ಈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಆಧಾರವಿಲ್ಲದೇ ಈ ಸುದ್ದಿಯನ್ನು ಪ್ರಕಟಿಸಿದ್ದಕ್ಕೆ ಸ್ಥಳೀಯ ಪತ್ರಿಕೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು ವಿವರಣೆ ನೀಡುವಂತೆ ಸೂಚಿಸಿದ್ದಾರೆ.
ಈ ವಿಚಾರದ ಬಗ್ಗೆ ಮೊಹಲಿ ಸೈಬರ್ ವಿಭಾಗದ ಇನ್ಸ್ ಪೆಕ್ಟರ್ ಚರಣ್ಜೀವ್ ಲಾಂಬ ಪ್ರತಿಕ್ರಿಯಿಸಿ, ಸೈಬರ್ ಸೆಲ್ ಸಹಾಯದಿಂದ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರವನ್ನು ಶೇರ್ ಮಾಡಿದವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
2015ರ ಡಿಸೆಂಬರ್ನಲ್ಲಿ ಚೆನ್ನೈನಲ್ಲಿ ಭಾರೀ ಮಳೆ ಬಂದಿತ್ತು. ಈ ಮಳೆಗೆ ಹಾರಾಟ ಸಾಧ್ಯವಾಗದ ಹಿನ್ನೆಲೆಯಲ್ಲಿ ಚೆನ್ನೈ ನಿಲ್ದಾಣದಲ್ಲಿ ವಿಮಾನಗಳು ನಿಂತಿತ್ತು. ಈ ಫೋಟೋವನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಅಹಮದಾಬಾದ್/ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಳೆಯಿಂದಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ ಎನ್ನುವ ಶೀರ್ಷಿಕೆ ಹಾಕಿ ಪ್ರಕಟಿಸುತ್ತಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹಲವು ಫೇಸ್ಬುಕ್, ಟಿಟ್ಟರ್ ಖಾತೆಗಳಿದ್ದು, ಅವುಗಳು ಲೈಕ್ ಮತ್ತು ಫಾಲೋವರ್ಸ್ ಗಳನ್ನು ಹೆಚ್ಚಿಸಲು ಈ ರೀತಿಯ ತಂತ್ರಗಳನ್ನು ಮಾಡುತ್ತಿವೆ. ಹೀಗಾಗಿ ಈ ಪೇಜ್ ಗಳಲ್ಲಿ ಬರುವ ಸುದ್ದಿ ಮತ್ತು ಮಾಹಿತಿಯನ್ನು ಕ್ರಾಸ್ ಚೆಕ್ ಮಾಡಿ ಬಳಿಕ ಶೇರ್ ಮಾಡುವುದು ಉತ್ತಮ.
ನಕಲಿ ಖಾತೆಗಳಿಂದ ತಪ್ಪು ಮಾಹಿತಿಗಳು ಪ್ರಸಾರವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಫೇಸ್ಬುಕ್, ಟ್ವಿಟ್ಟರ್ ಇತರೇ ತಾಣಗಳಲ್ಲಿ ರಾಜಕಾರಣಿಗಳು, ಮಾಧ್ಯಮಗಳು, ಸೆಲೆಬ್ರಿಟಿಗಳ ಪೇಜ್/ ಖಾತೆಯನ್ನು ಸುಲಭವಾಗಿ ಗುರುತಿಸಲೆಂದೇ ಖಾತೆಯ ಮುಂದೆ ಪ್ರತ್ಯೇಕ ಟಿಕ್ ಮಾರ್ಕ್ ಇರುತ್ತದೆ.