ಕೊಪ್ಪಳ: ಅಮಾಯಕ ಜನರಿಗೆ ಮಂಕುಬೂದಿ ಎರಚಿ ವಂಚಿಸುತ್ತಿದ್ದ ಡೋಂಗಿ ಬಾಬಾನನ್ನ ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.
ಯಾರಬ್ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು 56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿಯಿದ್ದು ಪೂಜೆ ಮಾಡಿ ತೆಗೆದು ಕೊಡುವುದಾಗಿ ಹೇಳಿ ಈತ ವಂಚನೆ ಮಾಡುತ್ತಿದ್ದ.
ಗಂಗಾವತಿಯ ಹಿರೇಜಂತಕಲ್ ನಿವಾಸಿ ಜಾಮಿದ್ ಪಾಷಾ ಅವರಿಂದ ಈತ 13 ತೊಲೆ ಬಂಗಾರ ಪಡೆದು ವಂಚಿಸಿದ್ದ. ಜಾಮಿದ್ ಪಾಷಾ ದೂರಿನ ಅನ್ವಯ ಪೊಲೀಸರು ಈಗ ಬಾಬಾನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಬಾಬಾನಿಂದ 1484 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಇನ್ನೋವಾ ಕಾರು, ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಕೊಲಾರ, ಬಳ್ಳಾರಿ, ಬೆಂಗಳೂರು ಯಲಹಂಕ, ಬಂಗಾರಪೇಟೆ, ಹೊಸಪೇಟೆ ಭಾಗಗಳಲ್ಲಿ ಡೋಂಗಿ ಬಾಬಾ ವಂಚನೆ ಎಸಗಿದ್ದಾನೆ ಎಂದು ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.