– ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆ
ಮೈಸೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸ್ತಿರೋ ಹೊತ್ತಲ್ಲೇ ಬಿಜೆಪಿಯವರಿಂದಲೇ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಮೋದಿ ಬರ್ತಿರೋ ದಿನವೇ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ರೆ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಬಿಜೆಪಿಗೆ ಗುಡ್ಬೈ ಹೇಳ್ತಿದ್ದಾರೆ.
ಭಾನುವಾರ ಮೋದಿ ಬರುತ್ತಿರೋ ದಿನವೇ ಬಿಜೆಪಿ ತೊರೆಯಲು ವಿಜಯಶಂಕರ್ ನಿರ್ಧರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನನ್ನನ್ನು ನಿಲ್ಲಿಸಿ ಇನ್ನೊಮ್ಮೆ ನನ್ನ ಬಲಿಪಶು ಮಾಡೋಕೆ ಬಿಜೆಪಿ ಹುನ್ನಾರ ಮಾಡಿತ್ತು. ಕಳೆದ ಬಾರಿ ಎಚ್.ಡಿ. ದೇವೇಗೌಡರ ವಿರುದ್ಧ ನನ್ನ ಕಣಕ್ಕೆ ಇಳಿಸಿ ಬಲಿಪಶು ಮಾಡಿದ್ದರು. ಇದೀಗ ಮತ್ತೆ ನಾನು ಬಲಿಪಶು ಆಗೋಕೆ ಸಿದ್ಧನಿಲ್ಲ. ಹೀಗಾಗಿ ಬಿಜೆಪಿ ತೊರೆಯುತ್ತಿದ್ದೇನೆ ಅಂತ ವಿಜಯ್ ಸ್ಪಷ್ಟಪಡಿಸಿದ್ದಾರೆ. ಯಾವ ಪಕ್ಷಕ್ಕೆ ಸೇರಬೇಕು ಎಂಬುದನ್ನು ಒಂದೆರಡು ವಾರದಲ್ಲಿ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್
ಯೋಗೇಶ್ವರ್ ಬಿಜೆಪಿಗೆ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ನಾಳೆ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ರಾಮನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಯೋಗೇಶ್ವರ್, ಇಂಧನ ಇಲಾಖೆಯಲ್ಲಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇಂಧನ ಇಲಾಖೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಯುತ್ತಿದ್ದು, ಪಾವಗಡದ ಸೋಲಾರ್ ಘಟಕದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ. ತಮಗೆ ಅನುಕೂಲ ಬಂದಂತೆ ಇಂಧನ ಖಾತೆ ದುರುಪಯೋಗ ನಡೆದಿದೆ. ನನ್ನ ಬಳಿ ಇಂಧನ ಇಲಾಖೆಯಲ್ಲಿ ನಡೆದಿರುವ ಅಕ್ರಮದ ದಾಖಲೆ ಇದೆ. ಮುಂದಿನ ದಿನಗಳಲ್ಲಿ ಮಾಧ್ಯಮದ ಮುಂದೆ ಇಂಧನ ಇಲಾಖೆಯ ಅಕ್ರಮ ಬಯಲು ಮಾಡುತ್ತೇನೆ ಅಂತ ಹೇಳಿದ್ದಾರೆ.
ವಿಜಯ್ ಶಂಕರ್ ಪಕ್ಷ ತೊರೆಯುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಜಯ್ ಶಂಕರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಅವರು ಚುನಾವಣೆಗೆ ನಿಲ್ಲಬಹುದಿತ್ತು. ಆದ್ರೆ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಗೊತ್ತಿಲ್ಲ ಅಂತ ಹೇಳಿದ್ರು.