ಕಲಬುರಗಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಮಾಜಿ ಮಂತ್ರಿ ರೇವೂನಾಯಕ್ ಬೆಳಮಗಿ ಗುಡ್ ಬೈ ಹೇಳುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿರುವ ರೇವೂನಾಯಕ್ ಬೆಳಮಗಿ, ಟಿಕೆಟ್ ಕೈತಪ್ಪಲು ಬಿ.ಎಸ್.ಯಡಿಯೂರಪ್ಪ ನೇರ ಹೊಣೆಯಾಗಿದ್ದಾರೆ. ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗದ ಕಾರಣ ಇದೀಗ ಅವರು ಸೇಡು ತಿರಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ನಾಯಕರು ನನ್ನ ಹೆಸರು ಫೈನಲ್ ಮಾಡಿದ್ದರು. ಆದರೂ ಬಿಎಸ್ವೈ ಟಿಕೆಟ್ ತಪ್ಪಿಸಿದ್ದಾರೆ. ಇಲ್ಲಿ ಹಣ ಮತ್ತು ಸೇಡಿನ ರಾಜಕಾರಣ ಮಾಡಲಾಗಿದೆ ಎಂದು ಬೆಳಮಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮಂತ್ರಿಯಾಗಿ ಯಾವ ಕೆಟ್ಟ ಕೆಲಸ ಮಾಡಿಲ್ಲ. ಕೊನೆಯ ಬಾರಿ ಜನರ ಸೇವೆ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದರೂ ಕೇಳಲಿಲ್ಲ. ಆದ್ರೂ ಬಿ.ಎಸ್. ಯಡಿಯೂರಪ್ಪ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಕೂಲಿ ನಾಲಿ ಮಾಡಿ ಬಂದವನನ್ನು ಶಾಸಕನನ್ನಾಗಿ ಮಾಡಿದ್ದಾರೆ. ಸಚಿವನನ್ನಾಗಿ ಮಾಡಿದ್ದಾರೆ. ನನ್ನ ಮೇಲೆ ಪ್ರೀತಿ ಇಟ್ಟು ಇಲ್ಲಿ ಆಗಮಿಸಿದ್ದಕ್ಕೆ ಧನ್ಯವಾದಗಳು. ಇದೇ ಉತ್ಸಾಹ ಮೇ 12 ರವರೆಗೂ ಇರಲಿ ಎಂದು ಬೆಂಬಲಿಗರ ಸಭೆಯಲ್ಲಿ ಬೆಳಮಗಿ ಭಾವುಕರಾದ್ರು.
ಹಲವು ಪಕ್ಷದವರು ಸಂಪರ್ಕದಲ್ಲಿದ್ದಾರೆ. ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ದುಡ್ಡಿನ ಆಸೆ ತೋರಿಸಿ ಮತ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಕೇಳಿದ್ದೇನೆ. ಮೇ 12ರವರೆಗೂ ಇದೇ ಉತ್ಸಾಹ ಇದ್ದು, ಅವರಿಗೆಲ್ಲಾ ತಕ್ಕ ಪಾಠ ಕಲಿಸಿ ಎಂದು ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರೇವೂನಾಯಕ್ ಬೆಳಮಗಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.