ಬಾಗಲಕೋಟೆ: ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ಆದ್ರೆ ಕೋಮುವಾದವನ್ನ ಬಿಂಬಿಸ್ತಿರೋ ಬಿಜೆಪಿ ಪಕ್ಷದ ವಿರೋಧಿ ನಾನು. ಬಿಜೆಪಿ ಹಾಗೂ ಆರ್ಎಸ್ಎಸ್ನ್ನು ಬೇರು ಸಹಿತ ಕಿತ್ತಾಕೋವರೆಗೂ ಹೋರಾಟ ಮಾಡುತ್ತೆನೆಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಕಾಶ್ ರೈ, ಸಂವಿಧಾನ ಬದಲಾವಣೆ ಮಾಡ್ತೀನಿ ಅಂದ ಸಂಸದರಿಗೆ, ಏಕೆ ಬದಲಾವಣೆ ಮಾಡ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ನನಗೆ ಹಿಂದೂ ವಿರೋಧಿ ಅಂತಾ ಕರೆದ್ರು. ನನ್ನ ಪ್ರಕಾರ ಬಿಜೆಪಿ ಅನ್ನೋದು ಈ ದೇಶದಲ್ಲಿರುವ ದೊಡ್ಡ ರೋಗ, ಬರುವ ದಿನಗಳಲ್ಲಿ ಈ ದೊಡ್ಡ ರೋಗ ಇರಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ರು. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮಾತನಾಡಿ, ಅದು ಅವರ ಹಕ್ಕು. ಸರ್ಕಾರ ಜನರ ಮನವಿಗೆ ಸ್ಪಂದಿಸಿದೆ. ಅದ್ರಲ್ಲಿ ಏನ್ ತಪ್ಪಿದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ್ರು.
ಕಾವೇರಿ ವಿಚಾರವಾಗಿ ಸರ್ಕಾರಗಳಿಗೆ ಸವಿಸ್ತಾರವಾದ ಪತ್ರ ಬರೆಯಲಿದ್ದೇನೆ. ಅಲ್ಲದೇ ಆ ಸಮಸ್ಯೆ ಬಗೆಹರಿಸುವ ಬಗ್ಗೆ ಚಿಂತಿಸಬೇಕಿದ್ದ ಸರ್ಕಾರಗಳು, ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ನಾಟಕವಾಡ್ತಿವೆ. ನೀರು ಕಡಿಮೆಯಾಗಲು ಕಾರಣ ಏನು ಎಂಬುದನ್ನೇ ಮರೆತು ನಮಗೆ ಅಷ್ಟು ನೀರು ಬೇಕು, ಇಷ್ಟು ನೀರು ಬೇಕು ಎಂದು ಜನರ ಭಾವನೆಗಳ ಜೊತೆ ಆಟವಾಡ್ತಿವೆ. ಜಸ್ಟ್ ಆಸ್ಕ್ ಫೌಂಡೇಶನ್ ಮೂಲಕ ಇಂತಹ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಯೋಜಯನ್ನ ಹಾಕಿಕೊಂಡಿದ್ದೇನೆ ಅಂತಾ ತಿಳಿಸಿದ್ರು.