ಬೆಂಗಳೂರು: ದಲಿತರ ಮನೆ ತುಂಬಾ ಚಿಕ್ಕದಾಗಿದೆ. ಎಲ್ಲರಿಗೂ ಊಟ ಒದಗಿಸುವುದು ಕಷ್ಟವಾಗಿತ್ತು. ಹೀಗಾಗಿ ಅವರು ಅಲ್ಲಿಂದ ತಂದು ಊಟಹಾಕಿದ್ದು ತಪ್ಪೇ. ದಲಿತರ ಮನೆಯಲ್ಲೇ ಊಟ ಮಾಡಿದ್ದು ನಿಜವಲ್ಲವೇ ಅಂತಾ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರ ಬರ ಪ್ರವಾಸದ ವೇಳೆ ತುಮಕೂರಿನಲ್ಲಿ ದಲಿತರ ಮನೆಯಲ್ಲಿ ಹೊಟೇಲ್ ತಿಂಡಿ ತಿಂದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯಿಸಿ, ಭಾರತೀಯ ಜನತಾ ಪಾರ್ಟಿಯ `ನಮ್ಮ ನಡೆ ಶೋಷಿತರ ಕಡೆ’ ಎಂದು ಹೇಳುತ್ತಿರೋದು ಕಾಂಗ್ರೆಸ್ಸಿನವರಿಗೆ ಭಯ ಹುಟ್ಟಿಸಿದೆ. ಯಾಕಂದ್ರೆ ನನ್ನ ನಡೆ ಎಲ್ಲ ಫೈಲ್ ಆಗಿದೆ. ನನಗೆ ಇನ್ನು ಇರೋದು ಒಂದೇ ನಡೆ. ಅದು ಸೀದಾ ನನ್ನ ಮನೆ ಮೈಸೂರು ಕಡೆಗೆ ಅಂತಾ ಸಿಎಂ ಮನದಲ್ಲಿ ಭಾವಿಸಿದ್ದಾರೆ. ಹೀಗಾಗಿ ಆ ಹೆದರಿಕೆಯಿಂದಾ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಅಂತಾ ಹೇಳಿದ್ರು.ನಾನು ಕೇಳ್ತೀನಿ ತಿಂಡಿ ಯಾರು ಮಾಡಿದ್ರು? ಗದ್ದೆಯಲ್ಲಿ ಭತ್ತ ಯಾರು ಬೆಳೆಸಿದ್ರು? ಯಾವ ಮಿಲ್ ನಲ್ಲಿ ಭತ್ತವನ್ನ ಅಕ್ಕಿ ಮಾಡಿದ್ರು? ಅದನ್ನ ಯಾರು ರುಬ್ಬಿದ್ರು? ಇದೆಲ್ಲ ಅವರಿಗೆ ಮುಖ್ಯವಾಗಿದೆ. ಒಂದು ದಲಿತ ಮನೆಯಲ್ಲಿ ಯಾರು ನಮಗೆ ಪ್ರೀತಿಯಿಂದ ಬಡಿಸಿದ್ರು? ಯಾರ ತಟ್ಟೆಯಲ್ಲಿ ತಿಂದೆವು? ತಮ್ಮ ಕೈಯಾರೆ ಬಡಿಸಿದವರು ಯಾರು? ಇದನ್ನ ನೋಡಬೇಕೇ ಹೊರತು ಯಾರು ಮಾಡಿದ್ರು ಅನ್ನೋದು ಮುಖ್ಯವಲ್ಲ ಎಂದು ತಿಳಿಸಿದ್ರು.
ಇದನ್ನೂ ಓದಿ: ವೀಡಿಯೋ ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಬಣ್ಣ ಬಯಲು
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಹತಾಶಾ ಭಾವನೆ ಎಲ್ಲಿವರೆಗೆ ಬಂದಿದೆ ಅಂದ್ರೆ ಇನ್ನು ಒಂದು ವರ್ಷ ಹಿಂಗೆ ಬಿಜೆಪಿ ಮೇಲೆ ಗೂಬೆ ಕೂರಿಸ್ತಾ ಇರ್ತಾರೆ. ಅವರಿಗೆ ಇದೇ ಕೆಲಸ. ಯಾಕಂದ್ರೆ ಅವರಿಂದ ಬೇರೇನೂ ಮಾಡಲು ಸಾಧ್ಯವಿಲ್ಲ ಅಂತಾ ಡಿವಿಎಸ್ ಹೇಳಿದ್ರು.
ತಿವಾರಿ ಪ್ರಕರಣ ಸಿಬಿಐಗೆ ವಹಿಸಿ: ಇದೇ ವೇಳೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕದ ಕುರಿತು ಮಾತನಾಡಿದ ಅವರು, ಇದು ಎರಡು ರಾಜ್ಯಗಳಿಗೆ ಅನ್ವಯಿಸುತ್ತೆ. ರಾಜ್ಯದ ಪೊಲೀಸ್ ಅಧಿಕಾರಿಗಳನ್ನ ತನಿಖೆಗೆ ಅಲ್ಲಿಗೆ ಕಳುಹಿಸಬೇಕು. ಎರಡು ರಾಜ್ಯಗಳ ಪೊಲೀಸರು ಪರಸ್ಪರ ಸಹಕರಿಸಬೇಕು. ಸಿಎಂ ಸಿದ್ದರಾಮಯ್ಯ ಆ ಕೆಲಸ ಮಾಡಬೇಕಿತ್ತು. ತಿವಾರಿ ಸಹೋದರ ಆರೋಪ ಮಾಡಿದ್ದಾರೆ. ನಾಲ್ಕು ತಿಂಗಳು ವೇತನ ನೀಡಿರಲಿಲ್ಲವೆಂದು ಹೇಳಿದ್ದಾರೆ. ಜೊತೆಗೆ ಸಾವಿರಾರು ಕೋಟಿ ರೂ ಹಗರಣದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ಸಿಬಿಐ ತನಿಖೆಗೆ ವಹಿಸಬೇಕು. ಆಗ ಸಾರ್ವಜನಿಕರಿಗೆ ಸಂಶಯ ನಿವಾರಣೆಯಾಗಲಿದೆ. ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸುವುದಿಲ್ಲ ಅಂತಾ ಹೇಳಿದ್ದಾರೆ.