ಚಂಡೀಘಡ: 27 ವರ್ಷದ ಮಹಿಳೆಯ ಶವವೊಂದು ಭಕ್ರಾ ಕಾಲುವೆಯಲ್ಲಿ ಪತ್ತೆಯಾಗಿದ್ದು, ಇದೀಗ ಈ ಸಂಬಂಧ ಮೃತಳ ಪತಿ ಹಾಗೂ ಅತ್ತೆ-ಮಾವನನ್ನು ಪೊಲೀಸರು ಬಂಧಿಸಿದ್ದಾರೆ.
ಹಿಮಾಚಲ ಪ್ರದೇಶದ ಕಾಂಗ್ರ ನಿವಾಸಿಯಾಗಿರೋ ನಿಖಿತಾ ಶರ್ಮಾ ಅವರು ಫೆಬ್ರವರಿ 18ರಿಂದ ನಾಪತ್ತೆಯಾಗಿದ್ದು, ಬಳಿಕ ಫೆಬ್ರವರಿ 27ರಂದು ಪಟಿಯಾಲ ಸಮೀಪದ ಸಮನಾದಲ್ಲಿರೋ ಭಕ್ರಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಸಂಬಂಧ ಕೇಸ್ ದಾಖಲಾದ ಬಳಿಕ ನಿಖಿತಾ ಕುಟುಂಬಸ್ಥರು ಬುರೈಲ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ನಿಖಿತಾ ಅವರು ಚಂಡೀಘಢ ನಿವಾಸಿ ಹೇಮಂತ್ ಶರ್ಮಾರನ್ನು 6 ವರ್ಷದ ಹಿಂದೆ ಮದುವೆಯಾಗಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಅವರು 3 ವರ್ಷದ ಮಗಳನ್ನು ಅಗಲಿದ್ದಾರೆ.
ಫೆಬ್ರವರಿ 18ರಂದು ಕೆಲಸಕ್ಕೆಂದು ಹೊರ ಹೋದ ನಿಖಿತಾ ಆ ಬಳಿಕ ಕಾಣೆಯಾಗಿದ್ದರೆಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಇನ್ನು ನಿಖಿತಾ ಅವರ ತಂದೆ ಸುರೇಂದ್ರ ಶರ್ಮಾ, ನಮ್ಮ ಮಗಳು ಹೇಮಂತ್ ನನ್ನು ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಪ್ರತಿದಿನ ಕಿರುಕುಳ ಕೊಡುತ್ತಿದ್ದನು. ಅಲ್ಲದೇ ಆಕೆಗೆ ಮಗಳು ಹುಟ್ಟಿದ ಬಳಿಕ ಗಂಡನಿಂದ ಅನೇಕ ತೊಂದರೆಗಳನ್ನು ಕೂಡ ಅನುಭವಿಸಿದ್ದಾಳೆ ಅಂತ ಹೇಳಿದ್ದಾರೆ.
ಮಗಳು ನಿಖಿತಾ ನಾಪತ್ತೆಯಾದ ಬಳಿಕ ಹಲವು ಬಾರಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ದಾಖಲಿಸಲು ಹೋದೆವು. ಆದ್ರೆ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ.
ಮೃತ ಮಹಿಳೆಯ ತಂದೆಯ ಹೇಳಿಕೆಯಂತೆ ಆಕೆಯ ಪತಿ ಹೇಮಂತ್ ಹಗೂ ಆತನ ಕುಟುಮಬಸ್ಥರ ವಿರುದ್ಧ ನಾವು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ ಅಂತ ಡಿಎಸ್ಪಿ ದೀಪಕ್ ಯಾದವ್ ರಾಷ್ಟೀಯ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಸದ್ಯ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಿಖಿತಾ ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.