ಬಾಗಲಕೋಟೆ: ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಮತ್ತು ಕಾಫಿತೋಟ ಚಿತ್ರದ ನಾಯಕಿ ಅಪೇಕ್ಷಾ ಪುರೋಹಿತ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಗರದ ಹರಿಪ್ರಿಯಾ ಹೋಟೆಲ್ನಲ್ಲಿ ಪವನ್ ಮತ್ತು ಅಪೇಕ್ಷಾ ಅವರ ನಿಶ್ಚಿತಾರ್ಥ ನೆರವೇರಿದ್ದು, ಇಬ್ಬರ ಕುಟುಂಬದ ಆಪ್ತರ ಮಧ್ಯೆ ಸರಳವಾಗಿ ನಿಶ್ಚಿತಾರ್ಥ ನಡೆದಿದೆ. ಪರಸ್ಪರ ಇಬ್ಬರು ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ.
ಉಂಗುರ ಬದಲಾಯಿಸಿಕೊಂಡ ನಂತರ ನಿರ್ದೇಶಕ ಮತ್ತು ನಟಿ ಪರಸ್ಪರ ಸಿಹಿ ತಿನ್ನಿಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮ ಪಟ್ಟಿದ್ದಾರೆ. ಪವನ್ ಒಡೆಯರ್ ಗೋಲ್ಡನ್ ಕಲರ್ ಶೆರ್ವಾನಿಯಲ್ಲಿ ಮಿಂಚಿದ್ದರೆ, ಅಪೇಕ್ಷಾ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕುಟುಂಬದ ಆಪ್ತರು, ಸ್ನೇಹಿತರು ಮಾತ್ರ ಸಾಕ್ಷಿಯಾಗಿದ್ದು, ಸ್ಯಾಂಡಲ್ ವುಡ್ ಸದಸ್ಯರು ಈ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಬಿಡುಗಡೆಗೊಂಡ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.
ಅಪೇಕ್ಷಾ ಓದಿದ್ದು ಫ್ಯಾಷನ್ ಡಿಸೈನಿಂಗ್. ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ಮೂಡಿ ಬರುತ್ತಿದ್ದ `ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಂತರ ಕಿರುತೆರೆಯಿಂದ ಬೆಳ್ಳಿ ತೆರೆಗೆ ಬರಲು ಟಿ.ಎನ್. ಸೀತಾರಾಮ್ ನಿರ್ದೇಶನದ `ಕಾಫೀ ತೋಟ’ ಸಿನಿಮಾ ಇವರಿಗೆ ಉತ್ತಮ ಅವಕಾಶವನ್ನು ನೀಡಿತ್ತು. ಸಿನಿಮಾ ರಂಗಕ್ಕೆ ಅಚ್ಚರಿಯಾಗಿ ಬಂದ ಇವರು `ಕಿನಾರೆ’ ಮತ್ತು `ಕಾಣದ ಕಡಲಿಗೆ’ ಎಂಬ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.