ನವದೆಹಲಿ: ಮಕ್ಕಳಾಗದಿದ್ದರಿಂದ ಮನನೊಂದ ಗೃಹಿಣಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಗುರುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಕ್ಕಳಾಗದಿರುವುದರಿಂದ ಆಕೆಗೆ ಗಂಡನ ಮನೆಯವರು ಕಿರುಕುಳ ನೀಡಿದ್ದೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರಜನಿ ಎಂದು ಗುರುತಿಸಲಾಗಿದ್ದು, ಇವರು ತುಘಲಕ್ ಬಾದ್ ಗ್ರಾಮದಲ್ಲಿ ತನ್ನ ಗಂಡ ಸಂದೀಪ್ ಜೊತೆ ನೆಲೆಸಿದ್ದರು. ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪತಿ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.
ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಸಂದರ್ಭದಲ್ಲಿ ಡೆತ್ ನೋಟ್ ದೊರೆತಿದ್ದು, ಅದರಲ್ಲಿ ತನಗೆ ಮಕ್ಕಳಾಗದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ. ರಜನಿ ಮತ್ತು ಸಂದೀಪ್ ದಾಂಪತ್ಯಕ್ಕೆ ಜೀವನಕ್ಕೆ ಕಾಲಿರಿಸಿ ಸುಮಾರು 7 ವರ್ಷಗಳೇ ಕಳೆದಿದ್ದವು ಅಂತ ಪೊಲೀಸ್ ಆಯುಕ್ತ ಚಿನ್ಮಯ್ ಸಿದ್ವಾಲ್ ಹೇಳಿದ್ದಾರೆ.
ಸಂದೀಪ್ ಅವರು ದೆಹಲಿ ಮೆಟ್ರೋದಲ್ಲಿ ಟಿಕೆಟ್ ಹಂಚಿಕೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಕರಣ ಕುರಿತಂತೆ ಮಹಿಳೆಯ ತಂದೆ, ತನ್ನ ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಹಿಂಸೆ ಕೊಡುತ್ತಿದ್ದರು. ಹೀಗಾಗಿ ಆಕೆ ತೊಂದರೆ ಅನಿಭವಿಸಿದ್ದಾಳೆ. ತವರು ಮನೆಯಿಂದ ವರದಕ್ಷಿಣಿ ತರುವಂತೆಯೂ ಒತ್ತಡ ಹೇರುತ್ತಿದ್ದರು. ಅಲ್ಲದೇ ಆಕೆಗೆ ಮದ್ವೆಯಾಗಿ ವರ್ಷಗಳೇ ಕಳೆದ್ರೂ ಮಕ್ಕಳಾಗಲಿಲ್ಲ. ಹೀಗಾಗಿ ಆಕೆಗೆ ಗಂಡನ ಮನೆಯವರು ಹೊಡೆಯುತ್ತಿದ್ದರು. ಪ್ರತೀ ನಿತ್ಯ ಹಿಂಸೆ ಅನುಭವಿಸುತ್ತಿದ್ದುದರಿಂದ ಆಕೆ ಈ ನಿರ್ಧಾರ ಕೈಗೊಂಡಿದ್ದಾಳೆಂದು ಆರೋಪಿಸಿದ್ದಾರೆ.
ಸದ್ಯ ಮಹಿಳೆಯ ತಂದೆ ರಾಮ್ ಹೇಳಿಕೆಯಂತೆ ಪೊಲೀಸರು ಪತಿ ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.