ಬಳ್ಳಾರಿ: ಫೇಸ್ಬುಕ್ ಹಾಗು ವಾಟ್ಸಪ್ನಲ್ಲಿ ಮಹಿಳೆಯರ ಬಗ್ಗೆ ಅವಹೇಳಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಅಧೀಕ್ಷಕ ಎಚ್.ಎಂ.ಸೋಮನಾಥ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೇಸ್ಬುಕ್ ಅಕೌಂಟ್ನಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಮತ್ತು ಸಚಿವೆ ಉಮಾಶ್ರೀ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಸಚಿವೆ ಉಮಾಶ್ರೀ ಅವರಿಗೆ ಉಪಮಾಶ್ರೀ, ಕಿತ್ತೂರ ಚೆನ್ನಮ್ಮರಿಗೆ ಕಿರಾಣಿ ಚೆನ್ನಮ್ಮ ಎಂದು ಹಾಗೂ ಶರಣೆ ಅಕ್ಕಮಹಾದೇವಿ ಅವರನ್ನು ಅಕ್ರಮದೇವಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಅವಮಾನ ಮಾಡಿದ್ದರು.
ಇತ್ತೀಚಿಗೆ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹದೇವಿ ಪ್ರಶಸ್ತಿಯನ್ನು ಸಚಿವೆ ಉಮಾಶ್ರೀ ಅವರು ಪ್ರಧಾನ ಮಾಡಿದ್ದರು. ಹೀಗಾಗಿ ಮಲ್ಲಿಕಾ ಘಂಟಿಯವರಿಗೆ ಪ್ರಶಸ್ತಿ ಸ್ವೀಕರಿಸುವ ನೈತಿಕತೆಯಿಲ್ಲ ಎನ್ನುವ ರೀತಿಯಲ್ಲಿ ಸೋಮನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಬರೆದುಕೊಂಡಿದ್ದರು.
ಈ ಫೇಸ್ಬುಕ್ ಪೋಸ್ಟ್ ನೋಡಿದ್ದ ಕಮಲಾಪುರ ಠಾಣಾ ಪೊಲೀಸರು ಯಾವ ದೂರು ದಾಖಲಾಗದಿದ್ದರೂ ಸೋಮನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.