ದಾವಣಗೆರೆ: ನಗರದ ಜಿಲ್ಲಾಸ್ಪತ್ರೆಯಲ್ಲಿ ಯಾರದ್ದೋ ಶವವನ್ನು ಬೇರೆಯವರಿಗೆ ನೀಡಿ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ.
ದಾವಣಗೆರೆ ತಾಲೂಕಿನ ಬೂದಾಳ್ ಗ್ರಾಮದ ಕೆಂಚಮ್ಮ(60) ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೆಂಚಮ್ಮರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಂತರ ಸಾವನ್ನಪ್ಪಿದ್ದರು. ಬುಧವಾರ ಕೆಂಚಮ್ಮ ಅವರ ಶವಪರೀಕ್ಷೆ ಮಾಡಿ ಶವವನ್ನು ನೀಡಲಾಗುವುದು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಮಂಗಳವಾರ ಮಲೇಬೆನ್ನೂರು ಗ್ರಾಮದ 28 ವರ್ಷದ ಶಿಲ್ಪಾ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಬುಧವಾರ ರಾತ್ರಿ ಆಸ್ಪತ್ರೆ ಸಿಬ್ಬಂದಿ ಯುವತಿಯ ಶವದ ಬದಲು ಕೆಂಚಮ್ಮ ಅವರ ಶವವನ್ನು ಮಲೇಬೆನ್ನೂರು ಗ್ರಾಮಸ್ಥರಿಗೆ ನೀಡಿದ್ದಾರೆ. ಮಲೇಬೆನ್ನೂರು ಗ್ರಾಮಸ್ಥರು ರಾತ್ರೋರಾತ್ರಿ ಮುಖವನ್ನೂ ನೋಡದೇ ನಮ್ಮ ತಾಯಿಯ ಶವವನ್ನೇ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಕೆಂಚಮ್ಮರ ಮಗ ಹನುಮಂತು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕೆಂಚಮ್ಮರ ಕುಟುಂಬಸ್ಥರು ಜಿಲ್ಲಾಸ್ಪತೆಯ ಶವಾಗಾರದ ಮುಂದೆ ಶವಕ್ಕಾಗಿ ರೋಧಿಸುತ್ತಿದ್ದಾರೆ. ಇನ್ನು ಶವಾಗಾರದಲ್ಲಿ ಉಳಿದಿರುವ ಶಿಲ್ಪಾ ಶವವವನ್ನು ಪಡೆಯಲು ಯಾರು ಮುಂದಾಗುತ್ತಿಲ್ಲ. ಮೇಲ್ನೋಟಕ್ಕೆ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಕಾಣುತ್ತಿದ್ದು, ಇದೂವರೆಗೂ ಯಾವ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯೆನ್ನು ನೀಡಿಲ್ಲ. ಈ ಸಂಬಂಧ ಜಿಲ್ಲಾಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ವಿರುದ್ಧ ದೂರನ್ನು ನೀಡಲು ಕೆಂಚಮ್ಮರ ಮಗ ಮುಂದಾಗಿದ್ದಾರೆ.