ಧಾರವಾಡ: ನಮ್ಮಲ್ಲಿನ ಬಹುತೇಕ ಹಬ್ಬಗಳಿಗೆ ಒಂದೊಂದು ಪ್ರಾಕೃತಿಕ ಹಿನ್ನೆಲೆಯನ್ನು ಹೊಂದಿವೆ. ಆಯಾ ಸಮಯದಲ್ಲಿನ ವಿಶೇಷತೆಗೆ ಅನುಗುಣವಾಗಿ ಹಬ್ಬಗಳನ್ನ ಆಚರಿಸಲಾಗುತ್ತೆ. ಧಾರವಾಡದಲ್ಲಿ ಸಂಕ್ರಮಣ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ಈ ಹಬ್ಬವನ್ನ ಧಾರವಾಡದಲ್ಲಿ ಅತ್ಯಂತ ವಿಷೇಶವಾಗಿ ಆಚರಣೆ ಮಾಡಲಾಗಿದೆ. ಮೈತುಂಬಾ ಚಿನ್ನದ ಆಭರಣ ಧರಿಸಿರುವ ಮಹಿಳೆಯರು, ತಲೆ ಮೇಲೆ ಬುತ್ತಿ ಗಂಟು ಹೊತ್ತುಕೊಂಡು ಬರುತ್ತಿರುವ ವನಿತೆಯರು. ಇದೆಲ್ಲಾ ಕಂಡು ಬಂದಿದ್ದು, ನಗರದ ಮೈಲಾರ ಗುಡ್ಡದ ಮೇಲೆ.
ಜಾನಪದ ಸಂಶೋಧನಾ ಕೇಂದ್ರವು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮರೆತು ಹೋದ ನಮ್ಮ ಜಾನಪದ ಸಂಸ್ಕೃತಿಯನ್ನು ನೆನಪಿಸೊ ಪ್ರಯತ್ನವನ್ನು ಈ ತಂಡ ಮಾಡಿದೆ. ಒಂದು ಕಡೆ ಜಾನಪದ ಗೀತೆಗಳ ಮಾಧುರ್ಯ ಇನ್ನೊಂದು ಕಡೆ ಮಹಿಳೆಯರ ಸಂಭ್ರಮ. ರಂಗಭೂಮಿ ಹಾಗೂ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಕಾರ್ಯಕ್ರಮದ ಮುಖ್ಯ ರುವಾರಿಗಳಾಗಿದ್ದರು.
ಇನ್ನೊಂದೆಡೆ ಜಾಲಿ ಕಿಡ್ಸ ಶಾಲೆಯಲ್ಲಿ ಚಿಕ್ಕ ಮಕ್ಕಳ ಜೊತೆ ಅವರ ಪಾಲಕರು ಹಬ್ಬವನ್ನ ಆಚರಣೆ ಮಾಡಿದರು. ತಾಯಂದಿರು ತಮ್ಮ ಮಕ್ಕಳ ಜೊತೆ ಸಂಕ್ರಮಣ ಆಚರಣೆ ಮಾಡುವುದಕ್ಕೆ ಗಡಿಗೆಯಲ್ಲಿ ಕಡಲೆ ಕಾಳು, ಕಬ್ಬು, ಕಲ್ಲು ಸಕ್ಕರೆ, ಬೆಲ್ಲದ ಹೋಳು ಹಾಗೂ ಎಳ್ಳು ಹಾಕಿ ತಂದಿದ್ದರು. ಈ ಸಂಭ್ರಮಕ್ಕಾಗಿ ಅವರೆಲ್ಲ ಬಗೆಬಗೆಯ ಅಡುಗೆ ಮಾಡಿ ತಂದಿದ್ದು, ಅದನ್ನ ನೋಡುತ್ತಲೇ ಹೊಟ್ಟೆ ತುಂಬುವಂತಿತ್ತು.