ಚಿಕ್ಕಮಗಳೂರು : ಚಿಕ್ಕಮಗಳೂರಿನ ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರೋ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಆಘಾತಕಾರಿ ಅಂಶವನ್ನು ತೆರೆದಿಟ್ಟಿದ್ದಾರೆ.
ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿರೋ ಸಂಘಟನಾಕಾರರು ಹಾಗೂ ವ್ಯಕ್ತಿಗಳ ಬಗ್ಗೆ ಹಾವಿನ ಜೊತೆ ಸರಸವಾಡಬೇಡಿ ಎಂದು ಎಚ್ಚರಿಕೆ ನೀಡಿದ ಅಣ್ಣಾಮಲೈ, ಮೃತ ಧನ್ಯಶ್ರೀಗೆ ಸಂತೋಷ್ ಸೇರಿದಂತೆ ಐವರು ಸಂಘಟನೆ ಕಾರ್ಯಕರ್ತರು ಧಮ್ಕಿ ಹಾಕಿದ್ದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾವಿಗೂ ಮುನ್ನ 36 ಗಂಟೆ ಏನನ್ನೂ ತಿನ್ನದೆ ಖಾಲಿ ಹೊಟ್ಟೆ ಇದ್ದದ್ದು ಮರಣೋತ್ತರ ಪರೀಕ್ಷೆಯಿಂದ ಧೃಡಪಟ್ಟಿದೆ ಎಂದು ಹೇಳಿದ್ದಾರೆ.
ಧನ್ಯಶ್ರೀ ಮನೆಗೆ ಐವರು ಸಂಘಟನಾಕಾರರು ಎರಡು ಬಾರಿ ಹೋಗಿ ಬಂದಿರೋ ದಾಖಲೆ ಇದೆ. ಅವರ ಮನೆಗೆ ಹೋಗಿ ಹೆತ್ತವರ ಎದುರೇ ಸೊಂಟದ ಕೆಳಗಿನ ಭಾಷೆಯಲ್ಲಿ ಬಾಯಿಗೆ ಬಂದಂತೆ ಬಯ್ದಿರೋದು ಗೊತ್ತಾಗಿದೆ. ಎರಡು, ಮೂರು, ನಾಲ್ಕನೇ ತಾರೀಖು ಬೋಲ್ಡ್ ಆಗಿದ್ದ ಧನ್ಯಶ್ರೀ ಐದನೇ ತಾರೀಖು, ಐವರು ಎರಡು ಬಾರಿ ಮನೆಗೆ ಬಂದುಹೋದ ಮೇಲೆ ಆಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಈ ಬಗ್ಗೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಧನ್ಯಶ್ರೀ ತಂದೆಯಿಂದ ತಪ್ಪಾಗಿ ದೂರು ನೀಡಿಸಿದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾಕಂದರೆ ಧನ್ಯಶ್ರೀ ತಂದೆ ನೀಡಿದ್ದ ದೂರಿಗೂ, ಸಿಕ್ಕ ದಾಖಲೆಗಳು, ಡೆತ್ನೋಟ್ಗೂ 1 ಪರ್ಸೆಂಟ್ ಕೂಡ ಮ್ಯಾಚ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಲದಕ್ಕೆ ಸಂತೋಷ್ ಎಂಬ ಹೆಸರಿನಲ್ಲಿ ಧನ್ಯಶ್ರೀ ಜೊತೆ ವಾಟ್ಸಪ್ನಲ್ಲಿ ಚಾಟ್ ಮಾಡಿರೋ ವ್ಯಕ್ತಿ ಸಂತೋಷ್ ಅಲ್ಲ. ಆತ ಯಾರೆಂಬುದು ಗೊತ್ತಾಗಿದೆ. ಸದ್ಯದಲ್ಲೇ ಅವನನ್ನೂ ಅರೆಸ್ಟ್ ಮಾಡ್ತೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಸಂಘಟನಾಕಾರರು ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ. ನಾವು ಖಾಕಿ ಬಟ್ಟೆ ಹಾಕಿದ ಮೇಲೆ ನಮಗೆ ಎಲ್ಲರೂ ಒಂದೇ. ಎಲ್ಲಾ ಧರ್ಮವೂ ಒಂದೇ. ನನ್ನ ಸಬ್ ಇನ್ಸ್ ಪೆಕ್ಟರ್ ನನ್ನ ಅಣತಿಯಂತೆ ಕೆಲಸ ಮಾಡಿದ್ದಾರೆ. ಇಲಾಖೆ ಬಗ್ಗೆ ಕೇವಲವಾಗಿ ಮಾತನಾಡಿರೋರ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೆ ದೊಡ್ಡ ವ್ಯಕ್ತಿಗಳೇ ಬರಲಿ, ಎಷ್ಟೆ ಒತ್ತಡ ಬಂದರು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.