ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದ ಕಲ್ಲೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇದರ ಅಂಗವಾಗಿ ಪಟ್ಟಣದಾದ್ಯಂತ ಸ್ವಾಗತ ಕೋರುವ ಕಟೌಟ್ ಹಾಗೂ ಬ್ಯಾನರ್ ಗಳನ್ನ ಹಾಕಲಾಗಿದೆ. ಅವುಗಳ ನಡುವೆ ಒಂದು ಬ್ಯಾನರ್ ಮಾತ್ರ ಎಲ್ಲ ಗಮನ ಸೆಳೆಯುತ್ತಿದೆ. ರಾಜಕೀಯ ನಾಯಕರ ಕಟೌಟ್ ಮಧ್ಯೆ ಮಾನಸಿಕ ಅಸ್ವಸ್ಥ ಭಿಕ್ಷುಕನೊಬ್ಬ ನಿಂತಿರುವ ಕಟೌಟ್ ನೋಡಲು ಜನ ಮುಗಿ ಬೀಳುತಿದ್ದಾರೆ.
ತಮಿಳುನಾಡು ಮೂಲದ ಗೋಪಾಲಯ್ಯ(50) ಬೋರ್ವೆಲ್ ವಾಹನದ ಜೊತೆ ಕೆಲಸಕ್ಕೆ ಬಂದು ಕಳೆದ ಹತ್ತು ವರ್ಷಗಳಿಂದ ಮೂಡಲಗಿಯಲ್ಲೇ ವಾಸವಾಗಿದ್ದಾನೆ. ಗೋಪಾಲಯ್ಯ ಬೋರ್ ವೆಲ್ ಕೆಲಸದಲ್ಲಿ ತೊಡಗಿದ್ದಾಗ ತೆಲೆಗೆ ಪೆಟ್ಟು ಬಿದ್ದು ಬುದ್ಧಿಭ್ರಮಣೆಯಾಗಿದೆ. ಹುಚ್ಚರಂತೆ ಬೀದಿಗಳಲ್ಲಿ ಅಲೆದಾಡುತಿದ್ದಾನೆ. ಯಾರಾದರೂ ಆಹಾರ ಕೊಟ್ಟರೆ ತಿಂದು ಅಲ್ಲೋ ಇಲ್ಲೋ ಮಲಗಿಕೊಂಡು ಕಾಲ ಕಳೆಯುತ್ತಿದ್ದಾನೆ.
ಸ್ವಭಾವದಲ್ಲಿ ಯಾರಿಗೂ ಕೆಡುಕನ್ನ ಬಯಸದ ಈತ ಇಡೀ ಪಟ್ಟಣದ ಜನತೆಯ ಪ್ರೀತಿಯ ‘ಗೋಪ್ಯಾ’ ಎಂದೆ ಚಿರಪರಿಚಿತನಾಗಿದ್ದಾನೆ. ಈತನಿಗೆ ಅಭಿಮಾನಿಗಳು ಕೂಡ ಇದ್ದಾರೆ. ಈ ಬಾರಿ ನಡೆದ ಕಲ್ಲೇಶ್ವರ ಜಾತ್ರೆ ಸಂದರ್ಭದಲ್ಲಿ ಅಭಿಮಾನಿಗಳು ಈತನ ಭಾವಚಿತ್ರ ಇರುವ ದೊಡ್ಡ ಸ್ವಾಗತ ಕಟೌಟ್ ಹಾಕಿ ಅಭಿಮಾನ ಮೆರೆದಿದ್ದಾರೆ.
ದೊಡ್ಡ ನಾಯಕರ ಕಟೌಟ್ ನಡುವೆ ಗೋಪ್ಯಾನ ಈ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದೆ.