ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮೂಲಮಠದ ಹಟ್ಟಿಯಿಂದ ಗಬ್ಬದ (ಗರ್ಭಿಣಿ) ಹಸುವಿನ ಕಳ್ಳತನವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕನೇ ಬಾರಿಗೆ ಗೋಶಾಲೆಗೆ ನುಗ್ಗಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮಠದ ಮೂಲ ಸಂಸ್ಥಾನ ಉಡುಪಿಯ ಹೊರವಲಯದಲ್ಲಿರುವ ಹಿರಿಯಡ್ಕದಲ್ಲಿದೆ. ಇಲ್ಲಿಗೆ ಭಾನುವಾರ ರಾತ್ರಿ ನಾಲ್ಕು ಮಂದಿ ಕಳ್ಳರು ಕಾರಿನಲ್ಲಿ ಬಂದಿದ್ದಾರೆ. ಟಾರ್ಚ್ ಹಿಡಿದು ಮಠದ ಕಡೆ ಬಂದ ಇಬ್ಬರು ಗೋಶಾಲೆಗೆ ನುಗ್ಗಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಒಂದು ಹಸುವನ್ನು ಹಗ್ಗ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಠದ ಸಿಬ್ಬಂದಿಗೆ ಕಳ್ಳತನದ ಶಬ್ದ ಕೇಳಿ ಎದ್ದು ಬಂದಿದ್ದಾರೆ. ಅಷ್ಟರಲ್ಲಿ ಒಂದು ಹಸುವನ್ನು ಕಾರಿಗೆ ತುಂಬಿಕೊಂಡಾಗಿತ್ತು. ಸಿಬ್ಬಂದಿ ತಕ್ಷಣ ಸೈರನ್ ಮೊಳಗಿಸಿದ್ದಾರೆ. ಬಂದ ದುಷ್ಟರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಶೀರೂರು ಮಠದಲ್ಲಿ ಇದು ಮೂರನೇ ಬಾರಿ ಕಳ್ಳತನ ಆಗುತ್ತಿರೋದು. ಒಂದು ಬಾರಿ ಖಾಲಿ ಕೈಯಲ್ಲಿ ಪರಾರಿಯಾದ ಕಳ್ಳರು, ಮತ್ತೊಮ್ಮೆ ವಾಹನವನ್ನು ಮರಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಇದೀಗ ಮೂರನೇ ಬಾರಿ ಒಂದು ಹಸುವನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿಂದೆ ಒಮ್ಮೆ ಕಳ್ಳತನ ಮಾಡುತ್ತಿದ್ದ ವಾಹನವನ್ನು ಸ್ವತಃ ಶೀರೂರು ಸ್ವಾಮೀಜಿಯೆ ಕಾರಿನಲ್ಲಿ ಬೆನ್ನಟ್ಟಿ ಹೋಗಿದ್ದರು. ಈ ಸಂದರ್ಭ ಸ್ವಾಮೀಜಿಯ ಕಾರು ಅಪಘಾತಕ್ಕೊಳಗಾಗಿತ್ತು. ಈ ಸಂದರ್ಭ ಕೂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.