ಧಾರವಾಡ: ವಿಧಾನ ಸೌಧವೇನು ಗಂಗೋತ್ರಿ ಅಲ್ಲ, ವಿಧಾನ ಸೌಧದಲ್ಲಿಯೂ ಭ್ರಷ್ಟಾಚಾರವಿದೆ ಎಂದು ಆರೋಗ್ಯ ಸಚಿವ ಆರ್.ರಮೇಶ್ ಕುಮಾರ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸೂಟ್ಕೇಸ್ ಕೊಟ್ಟರೆ ಮಾತ್ರ ಕೆಲಸ ನಡೆಯೋದು ಎಂಬ ಹಂಪಿ ವಿವಿ ಕುಲಪತಿ ಮಲ್ಲಿಕಾ ಘಂಟಿ ಹೇಳಿಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಲ್ಲಿಕಾ ಘಂಟಿ ಅವರು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರ ಹೇಳಿಕೆಯನ್ನು ಕಡೆಗಣಿಸಲು ಆಗಲ್ಲ. ಆದರೆ ಆರೋಪದ ಬಗ್ಗೆ ದಾಖಲೆಗಳಿದ್ದರೆ ಒದಗಿಸಲಿ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಪ್ರತಿಯೊಬ್ಬರಿಗೂ ತಮ್ಮ ವಿಚಾರ ಪ್ರತಿಪಾದಿಸುವ ಹಕ್ಕಿದೆ. ಆದರೆ ಸಮಾಜದ ಮುಖಂಡರೆಲ್ಲ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಬದಲಾಗಿ ಭಿನ್ನಾಭಿಪ್ರಾಯಕ್ಕಾಗಿ ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಹಿಂಸಾ ರೂಪದ ಪ್ರತಿಭಟನೆ ಯಾರೂ ಮಾಡಕೂಡದು ಎಂದು ಮನವಿ ಮಾಡಿಕೊಂಡರು.