ಕಲಬುರಗಿ: ನವ ಕರ್ನಾಟಕ ಯಾತ್ರೆ ವೇಳೆ ಸಿಎಂ ಸಿದ್ದರಾಮಯ್ಯಗೆ ಗದೆ ಕೊಟ್ಟಿದ್ದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಈಗ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಅವರ ಅಫಜಲಪುರ ಕ್ಷೇತ್ರ ಭೇಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ ಹೆಚ್ಡಿಡಿ ಗೆ ಸ್ವಾಗತ ಕೋರಿ ಅಫಜಲಪುರ ಪಟ್ಟಣದಲ್ಲಿ ಬಹುತೇಕ ಕಡೆ ಸ್ವಾಗತದ ಕಟೌಟ್ ಹಾಕಿಸಿದ್ದಾರೆ.
ಕಟೌಟ್ ನಲ್ಲಿ ಪ್ರಮುಖವಾಗಿ 22 ವರ್ಷಗಳ ಬಳಿಕ ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ನಗರಕ್ಕೆ ಬರ್ತಿರೋ ಮಣ್ಣಿನ ಮಗ, ದೇಶ ಕಂಡ ಕರ್ನಾಟಕದ ಪ್ರಪ್ರಥಮ ಪ್ರಧಾನಮಂತ್ರಿ, ಹಿರಿಯ ಮುತ್ಸದಿ, ರೈತರ ಕಣ್ಮಣಿ, ಭೀಮಾ ಏತನೀರಾವರಿ ಯೋಜನೆಗೆ ಅನುದಾನ ನೀಡಿದ ಮಾನ್ಯ ಮಾಜಿ ಪ್ರಧಾನಮಂತ್ರಿಗಳಾದ ಹೆಚ್ಡಿ ದೇವೇಗೌಡರಿಗೆ ಮಾಲೀಕಯ್ಯ ಗುತ್ತೇದಾರ್ ಕುಟುಂಬ ಮತ್ತು ರೈತ ಸಮುದಾಯ, ಗುತ್ತೇದಾರ್ ಅಭಿಮಾನಿಗಳಿಂದ ಹಾರ್ದಿಕ ಸುಸ್ವಾಗತ ಅಂತ ಪೋಸ್ಟರ್ ಹಾಕಲಾಗಿದೆ. ಇದು ಕ್ಷೇತ್ರದ ಜನರಲ್ಲಿ ತೀವ್ರ ಕೂತೂಹಲ ಮೂಡಿಸಿದೆ.
ಈ ಕುರಿತು ಮಾಲೀಕಯ್ಯ ಗುತ್ತೇದಾರ ಅವರನ್ನು ಕೇಳಿದ್ರೆ, ಭೀಮಾ ಏತ ನೀರಾವರಿಗೆ ದೇವೇಗೌಡರ ಕೊಡುಗೆ ಅಪಾರವಾಗಿದೆ. ಹೀಗಾಗಿ ಅವರನ್ನು ಸ್ವಾಗತಿಸಲಾಗುತ್ತಿದೆ. ಇದರಲ್ಲಿ ರಾಜಕೀಯ ಇಲ್ಲ. ನಾನು ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ ಅಂತಾ ಸ್ಟಷ್ಟಪಡಿಸಿದ್ದಾರೆ.