ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ, ಅದರಲ್ಲೂ ಉತ್ತರಪ್ರದೇಶದಲ್ಲಿನ ಸೋಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತೊಡಕಾಗಿ ಪರಿಣಮಿಸಿದೆ.
ಉತ್ತರಪ್ರದೇಶದಲ್ಲಿ ತಮ್ಮ ಲೆಕ್ಕಾಚಾರ ತಪ್ಪಾಗಿದ್ದನ್ನು ಒಪ್ಪಿಕೊಂಡ ರಾಹುಲ್, ಕಾಂಗ್ರೆಸ್ನಲ್ಲಿ ಕೆಲವು ಬದಲಾವಣೆಗಳನ್ನ ಮಾಡೋ ಅವಶ್ಯಕತೆ ಇದೆ ಅಂದ್ರು. ನಾವು ವಿರೋಧಪಕ್ಷದಲ್ಲಿದ್ದೇವೆ, ಏಳು ಬೀಳು ಇದ್ದೇ ಇರುತ್ತದೆ. ಉತ್ತರಪ್ರದೇಶದಲ್ಲಿ ಸ್ವಲ್ಪ ಕೆಳಗೆ ಇಳಿದಿದ್ದೇವೆ. ಅದನ್ನು ಒಪ್ಪಿಕೊಳ್ಳುತ್ತೇವೆ ಅಂತ ರಾಹುಲ್ ಹೇಳಿದ್ರು.
ಉತ್ತರಪ್ರದೇಶದಲ್ಲಿ ಹಣದ ಮೂಲಕ ಚುನಾವಣೆ ಗೆದ್ದು ಬಿಜೆಪಿ ಜನಾದೇಶವನ್ನು ಕಳವು ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ರು. 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಎರಡರಲ್ಲಿ ಮಾತ್ರ. ನಾವು ಮೂರರಲ್ಲಿ ಗೆದ್ದೆವು. ಆದ್ರೆ 2 ರಾಜ್ಯಗಳಲ್ಲಿ(ಗೋವಾ, ಮಣಿಪುರ) ನಾವೇ ಗೆದ್ದಿದ್ದರೂ ಹಣ ಮತ್ತು ಅಧಿಕಾರದ ಮೂಲಕ ಬಿಜೆಪಿಯವರಿಂದ ಪ್ರಜಾಪ್ರಭುತ್ವವೇ ನಾಶವಾಗ್ತಿದೆ ಎಂದು ರಾಹುಲ್ ಹೇಳಿದ್ರು.
ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್ ಇಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ನಮ್ಮ ಹೋರಾಟ ಬಿಜೆಪಿಯ ಸಿದ್ಧಾಂತದ ವಿರುದ್ಧ. ಅವರು ಗೋವಾ ಮತ್ತು ಮಣಿಪುರದಲ್ಲಿ ಏನು ಮಾಡ್ತಿದ್ದಾರೋ ಅದೇ ಸಿದ್ಧಾಂತದ ವಿರುದ್ಧವೇ ನಾವು ಹೋರಾಡುತ್ತಿರುವುದು ಅಂತ ರಾಹುಲ್ ಗಾಂಧಿ ಹೇಳಿದ್ರು.
5 ಕಡೆ ಚುನಾವಣೆ ಎದುರಿಸಿದ್ದೇವೆ. ಉತ್ತರಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಸೋತಿದ್ದೇವೆ ನಿಜ. ಆದ್ರೆ ಈ ಚುನಾವಣೆಗಳನ್ನ ನೋಡಿದ್ರೆ, ಪ್ರಾದೇಶಿಕ ನಾಯಕರು ಚುನಾವಣೆ ನಡೆಸಿದ್ದು, ಇದೇ ಕಾರಣದಿಂದ ನಾವು ಪಂಜಾಬ್ನಲ್ಲಿ ಗೆದ್ದಿದ್ದೇವೆ ಅಂದ್ರು.