ವಾರಣಾಸಿ: ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂನಮ್ ಯಾದವ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಶನಿವಾರ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಪೂನಮ್ ಯಾದವ್ ಮೇಲೆ ಕಲ್ಲೆಸೆದಿದ್ದಾರೆ. ಈ ವೇಳೆ ಪೂನಮ್ ಅವರನ್ನು ಕಾಪಾಡಲೆಂದು ಅವರ ಚಿಕ್ಕಪ್ಪ ಮತ್ತು ಸಹೋದರ ಸಂಬಂಧಿ ಬಂದಿದ್ದು, ಅವರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಘಟನೆಯ ತೀವ್ರತೆಯನ್ನು ಅರಿತ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪೂನಮ್ ಯಾದವ್ ಅವರನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕಳುಹಿಸಿ ಕೊಡಲಾಯಿತು. ಅಲ್ಲದೇ ದುಷ್ಕರ್ಮಿಗಳಿಂದ ಪೂನಮ್ ಅವರನ್ನು ಅಪಾಯದಿಂದ ಪಾರು ಮಾಡಲಾಗಿದೆ. ದಾಳಿ ನಡೆಸಿದವರು ಯಾರೆಂಬುದು ತಿಳಿದುಬಂದಿಲ್ಲ ಅಂತ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ತಿಳಿಸಿದ್ದಾರೆ.
ಪೂನಮ್ ಸಂಬಂಧಿಕರ ಮನೆಗೆ ತೆರಳಿದ್ದಾಗ ಅಲ್ಲಿಗೆ ಆಗಮಿಸಿದ ನೆರೆಮನೆಯವರು ಹಳೆಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಗಳ ಮಾಡಿದ್ದಾರೆ. ನೆರೆಮನೆಯವರು ತಮ್ಮ ಸಂಬಂಧಿಕರ ಮೇಲೆ ಜಗಳ ಮಾಡುತ್ತಿದ್ದಾಗ ಪೂನಮ್ ಯಾದವ್ ಅವರು ಮಧ್ಯಪ್ರವೇಶಿಸಿದ್ದು, ಈ ವೇಳೆ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪೂನಮ್ ಯಾದವ್ ಅವರು ಆಸ್ಟ್ರೆಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 2018ರ ಕಾಮನ್ ವೆಲ್ತ್ ಗೇಮ್ಸ್ ನ 69 ಕೆ.ಜಿ ವಿಭಾಗದ ವೇಟ್ ಲಿಫ್ಟ್ ಂಗ್ ಭಾರತದ ಪರ ಆಟವಾಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.