ಮೈಸೂರು: ಡಾಂಬರ್ ನಲ್ಲಿ ಸಿಲುಕಿದ ನಾಗರಹಾವು ಜೀವನ್ಮರಣದ ಹೋರಾಟದಲ್ಲಿ ನರಳಾಡಿ ಕೊನೆಗೂ ಬದುಕುಳಿದಿದೆ.
ಮೈಸೂರಿನ ಆರ್ಬಿಐ ಕಾಲೋನಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಹಾಕಿದ್ದ ಡಾಂಬರ್ ನಲ್ಲಿ ನಾಗರಹಾವು ಸಿಲುಕಿತ್ತು. ಇದರಿಂದ ನಾಗರಹಾವಿಗೆ ತೆವಳಿಕೊಂಡು ಮುಂದೆ ಹೋಗಲು ಸಾಧ್ಯವಾಗದೇ ಉಸಿರಾಡಲು ಸಾಧ್ಯವಾಗದೆ ಜೀವನ್ಮರಣ ಹೋರಾಟ ನಡೆಸುತಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಉರಗತಜ್ಞ ಕೆಂಪರಾಜು ಅವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕೆಂಪರಾಜು ಹಾವನ್ನು ರಕ್ಷಿಸಿ ಹಾವಿನ ಮೈಮೇಲಿದ್ದ ಡಾಂಬರ್ ಶುಚಿಗೊಳಿಸಿದರು. ನಂತರ ಬದುಕುಳಿದ ಹಾವಿಗೆ ನೀರು ಕುಡಿಸಿದರು.
ಅಗ್ನಿಶಾಮಕ ಇಲಾಖೆಯಲ್ಲಿ ಆರಕ್ಷಕರಾಗಿ ಹಾವು ಹಿಡಿಯುವ ಹವ್ಯಾಸ ಬೆಳೆಸಿಕೊಂಡಿರುವ ಕೆಂಪರಾಜು ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.