ಬೆಂಗಳೂರು: ಇಲಿಯನ್ನು ಅಟ್ಟಾಡಿಸಿಕೊಮಡು ಬಂದ ನಾಗರಹಾವೊಂದು ಮನೆಗೆ ನುಗ್ಗಿ ಪ್ಲಾಸ್ಟಿಕ್ ಪೈಪ್ ನಲ್ಲಿ ಅದರ ತಲೆ ಸಿಲುಕಿ ಗಂಟೆಗಟ್ಟಲೆ ನರಳಾಡಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಾಗರಾಜು ಎಂಬವರ ಮನೆಗೆ ನಾಗರಹಾವು ನುಗ್ಗಿದೆ. ಅಂತೆಯೇ ಇಲಿಯನ್ನು ಅಟ್ಟಾಡಿಸಿಕೊಂಡು ಬಂದು ಪೈಪ್ ಗೆ ಸೇರಿಕೊಂಡು ಸದರ ತಲೆ ಸಿಲುಕಿಕೊಂಡು ಒದ್ದಾಡಿದೆ. ಇದರಿಂದ ಆಂತಕಗೊಂಡ ಮನೆಯವರು ನಾಗರ ಹಾವನ್ನು ಪೈಪ್ ನಿಂದ ರಕ್ಷಿಸಿಕೊಳ್ಳಲು ಸ್ನೇಕ್ ಲೋಕೇಶ್ ಕರೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ಲೋಕೇಶ್ ಅವರು ಪ್ಲಾಸ್ಟಿಕ್ ಪೈಪ್ ನಿಂದ ನಾಗರಹಾವನ್ನು ಹೊರತೆಗೆಯುವ ಮೂಲಕ ರಕ್ಷಣೆ ಮಾಡಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ಡಾಂಬರ್ ನಲ್ಲಿ ಸಿಲುಕಿದ ನಾಗರಹಾವು ಜೀವನ್ಮರಣದ ಹೋರಾಟದಲ್ಲಿ ನರಳಾಡಿ ಕೊನೆಗೂ ಬದುಕುಳಿದಿತ್ತು.
ಮೈಸೂರಿನ ಆರ್ ಬಿಐ ಕಾಲೋನಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಹಾಕಿದ್ದ ಡಾಂಬರ್ ನಲ್ಲಿ ನಾಗರಹಾವು ಸಿಲುಕಿತ್ತು. ಇದರಿಂದ ನಾಗರಹಾವಿಗೆ ತೆವಳಿಕೊಂಡು ಮುಂದೆ ಹೋಗಲು ಸಾಧ್ಯವಾಗದೇ ಉಸಿರಾಡಲು ಸಾಧ್ಯವಾಗದೆ ಜೀವನ್ಮರಣ ಹೋರಾಟ ನಡೆಸುತಿತ್ತು. ತಕ್ಷಣ ಹಾವನ್ನು ರಕ್ಷಿಸಿ ಅದರ ಮೈಮೇಲಿದ್ದ ಡಾಂಬರ್ ಶುಚಿಗೊಳಿಸಿ, ಬಳಿಕ ಹಾವಿಗೆ ನೀರು ಕುಡಿಸಿ ಮಾನವೀಯತೆ ಮೆರೆದಿದ್ದರು.