ಮೈಸೂರು: ರಂಗೇರಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗೆ ಇವತ್ತಿನಿಂದ ಘಟಾನುಘಟಿ ನಾಯಕರ ಎಂಟ್ರಿಯಾಗಲಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಇಡೀ ಸಂಪುಟದೊಂದಿಗೆ ಮೈಸೂರಿಗೆ ಆಗಮಿಸಿದ್ದು, 10 ದಿನಗಳ ಕಾಲ ವಾಸ್ತವ್ಯ ಹೂಡಿ ಬಹಿರಂಗ ಪ್ರಚಾರ, ರೋಡ್ ಶೋಗಳಲ್ಲಿ ಭಾಗಿಯಾಗಲಿದ್ದಾರೆ.
ಮೂರು ದಿನ ನಂಜನಗೂಡು ಹಾಗೂ ಮೂರು ದಿನ ಗುಂಡ್ಲುಪೇಟೆಯಲ್ಲಿ ಸಿಎಂ ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿಯಿಂದ ಯಡಿಯೂರಪ್ಪ ಕೂಡ ಇವತ್ತಿನಿಂದ ಇನ್ನಷ್ಟು ಬಿರುಸಿನ ಪ್ರಚಾರ ಕೈಗೊಳ್ಳಲಿದ್ದು, ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಬಿಎಸ್ವೈ ಜೊತೆ ಹಾಲಿ ಕೇಂದ್ರ ಸಚಿವರು, ಶಾಸಕರು, ಮಾಜಿ ಸಚಿವರು, ಬಿಜೆಪಿ ಪರ ಕ್ಯಾಂಪೇನ್ ಮಾಡಲಿದ್ದಾರೆ. ಉಪಚುನಾವಣೆಯಲ್ಲಿ ಕೇಂದ್ರಬಿಂದುವಾಗಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಇನ್ನೆರಡು ದಿನದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದ್ದು ಎರಡು ಪಕ್ಷಗಳ ಮುಖಂಡರು ಇವತ್ತಿನಿಂದ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.