ಕೊಪ್ಪಳ: ನೀವು ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ದೀರಾ? ನಿಮ್ಮ ಸುತ್ತಮುತ್ತಲು ತೆರೆದ ಕೊಳವೆ ಬಾವಿ ಇದೆಯೇ? ಹಾಗಾದ್ರೆ ತಡಮಾಡದೇ ಸ್ಥಳದ ಮಾಹಿತಿಯ ಜೊತೆಗೆ ಫೋಟೋವನ್ನು ವಾಟ್ಸಪ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ.
ಆರಂಭದ ಪೀಠಿಕೆ ಓದಿ ಖಾತೆಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ ಎಂದು ನೀವು ಭಾವಿಸಿದರೆ ತಪ್ಪಾದಿತು. ತೆರೆದ ಕೊಳವೆ ಬಾವಿ ದುರಂತಕ್ಕೆ ಮನಮಿಡಿದ ಪ್ರಗತಿಪರ ರೈತರೊಬ್ಬರು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಜಿಲ್ಲೆಯ ಗಂಗಾವತಿ ಪಟ್ಟಣದ ಪ್ರಗತಿಪರ ರೈತ ಶಿವಪ್ಪ ಚಳ್ಳಕೇರಿ ಅವರು 500 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಇಂದು ತೆರೆದ ಕೊಳವೆ ಬಾವಿ ಮುಚ್ಚಿಸೋದಕ್ಕಾಗಿ ಒಂದು ಲಕ್ಷ ರೂಪಾಯಿ ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗ್ಲೇ 338 ವಿಫಲ ಕೊಳವೆ ಬಾವಿಗಳಿವೆ ಅಲ್ದೆ ಕೊಪ್ಪಳ ನಗರದಲ್ಲಿ 21 ವಿಫಲ ಕೊಳವೆ ಬಾವಿಗಳಿವೆ. ತೆರೆದ ಕೊಳವೆ ಬಾವಿ ಮುಚ್ಚಬೇಕಂತ ಮಾತನಾಡೋವ್ರೆ ಹೆಚ್ಚು ಆದ್ರೆ ಯಾರು ಮುಚ್ಚೋಕೆ ಮುಂದಾಗೊಲ್ಲ. ಆದ್ರೆ ಇಂತಹ ಬಹುಮಾನ ಘೋಷಣೆ ಮಾಡೋದ್ರಿಂದ ಮುಚ್ಚುತ್ತಾರೆ ಅನ್ನೋ ನಿರೀಕ್ಷೆಯಿದೆ ಎಂದು ಶಿವಪ್ಪ ಅವರು ತಿಳಿಸಿದ್ದಾರೆ.
ಬಹುಮಾನ ಪಡೆಯಲು ಹೀಗೆ ಮಾಡ್ಬೇಕು: ಕೊಪ್ಪಳ ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿ ಇರೋ ಫೋಟೋ ಹಾಗೂ ಮುಚ್ಚಿದ ಬಳಿಕ ಫೋಟೋ ಮತ್ತು ಗ್ರಾಮ ಪಂಚಾಯತ್ನಿಂದ ದೃಢೀಕರಣ ಪತ್ರದ ಜೊತೆಗೆ ಬ್ಯಾಂಕ್ ಖಾತೆಯ ಮಾಹಿತಿಯನ್ನು 8861318934 ನಂಬರ್ ಗೆ ವಾಟ್ಸಾಪ್ ಮಾಡಿದ್ರೆ 500 ರೂ. ಬಹುಮಾನ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಈ ಬಹುಮಾನದ ನೀಡುವ ಅವಧಿ 6 ತಿಂಗಳು ಆಗಿದ್ದು, ಜನರು ಫೋಟೋಗಳನ್ನು ಕಳುಹಿಸಬಹುದು.
ರಾಜ್ಯದಲ್ಲಿ ತೆರೆದ ಕೊಳವೆ ಬಾವಿ ಮುಚ್ಚೋ ಅಭಿಯಾನವಾಗ್ತಿದೆ. ಆದ್ರೆ ಕೊಪ್ಪಳದ ಪ್ರಗತಿಪರ ರೈತ ಬಹುಮಾನ ಘೋಷಣೆ ಮಾಡೋ ಮೂಲಕ ಗಮನಸೆಳೆದಿದ್ದಾರೆ. ಇನ್ಮೇಲಾದ್ರೂ ತೆರೆದ ಕೊಳವೆ ಬಾವಿ ಮುಚ್ಚಿ ಮುಂದೆ ಇಂಥ ದುರಂತ ಆಗದಿರಲಿ ಅನ್ನೋದೆ ಎಲ್ಲರ ಆಶಯ.