ಚಿತ್ತೂರು: ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಾಯಿಯನ್ನೇ 29 ವರ್ಷದ ಯುವಕನೊಬ್ಬ ಕೊಲೆಗೈದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಿನಿ ಕುಪ್ಪಂ ಎಂಬಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಬೆಲ್ಲಮ್ಮ(50) ತನ್ನ ಮಗ ಜೆ ಸುಬ್ರಹ್ಮಣ್ಯಂ ಕೈಯಿಂದ್ಲೇ ಕೊಲೆಯಾಗಿದ್ದಾರೆ.
ಏನಿದು ಘಟನೆ?: ಆರೋಪಿ ಸುಬ್ರಹ್ಮಣ್ಯಂಗೆ ಕುಡಿತದ ಚಟವಿತ್ತು. ಹೀಗಾಗಿ ಪತ್ನಿ ದೂರವಾದ ಬಳಿಕ ಈತ ಪಕ್ಕದ ಗ್ರಾಮದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದನು. ಪ್ರತೀ ದಿನ ಮದ್ಯಪಾನ ಮಾಡಲು ಹಣ ಕೊಡುವಂತೆ ತಾಯಿಯನ್ನು ಪೀಡಿಸುತ್ತಿದ್ದನು.
ಅಂತೆಯೇ ಸೋಮವಾರವೂ ಕೂಡ ತಾಯಿಯ ಬಳಿ ಬಂದು ಹಣ ಕೇಳಿದ್ದಾನೆ. ಆದ್ರೆ ತಾಯಿ ಮಾತ್ರ ಆತನಿಗೆ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಮಗ ಸುಬ್ರಹ್ಮಣ್ಯಂ ತಾಯಿ ಮಲಗಿದ್ದ ಸಂದರ್ಭದಲ್ಲಿ ಹೊದಿಕೆಯನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ ತಾಯಿಯನ್ನು ನೋಡಲೆಂದು ಬೆಲ್ಲಮ್ಮ ಮಗಳು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಬೆಲ್ಲಮ್ಮ ಅವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಲ್ಲಿ 1.5 ಎಕರೆ ಜಮೀನಿದೆ. ಕಳೆದ ತಿಂಗಳಷ್ಟೇ ಆಟೋ ರಿಕ್ಷಾ ಖರೀದಿಸಲು ತಾಯಿ ದೊಡ್ಡ ಮಗನಿಗೆ 50,000 ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಎರಡನೇ ಮಗ ಸುಬ್ರಹ್ಮಣ್ಯಂ ತನಗೂ ಹಣ ಕೊಡುವಂತೆ ಹಾಗೂ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರಿದ್ದನು ಎಂಬುದಾಗಿ ವರದಿಯಾಗಿದೆ.
ಸದ್ಯ ತಾಯಿ ಕೊಲೆ ಪ್ರಕರಣ ಸಂಬಂಧ ಮಗಳು ಸ್ಥಳೀಯ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ. ಮೃತ ಬೆಲ್ಲಮ್ಮ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.