ಚಿತ್ರದುರ್ಗ: ರಾಜ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರೋ ಸಿದ್ಧತೆಯಲ್ಲಿದೆ. ಆದರೆ ಮುಗ್ಧ ಮಕ್ಕಳನ್ನು ಮುಳ್ಳಿನ ಮೇಲೆ ಉರುಳಾಡಿಸೋ ಅಮಾನವೀಯ ಆಚರಣೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 65ರಷ್ಟು ಹಿಂದುಳಿದ ಜನಾಂಗದವರಿದ್ದಾರೆ. ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಇದಕ್ಕೆ ಸಾಕ್ಷಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಐಲಾಪುರ ಎಂಬ ಗ್ರಾಮದಲ್ಲಿ ನಡೆಯುವ ಮುಳ್ಳಿನ ಪವಾಡ. ನವರಾತ್ರಿ ಆಚರಣೆಯ ಕೊನೆಯ ದಿನದಂದು ಈ ಗ್ರಾಮದಲ್ಲಿ ನಡೆಯೋ ದುರ್ಗಾಂಬಿಕಾ ದೇವಿಯ ಜಾತ್ರೆ ವೇಳೆ ದೇವಸ್ಥಾನದ ಮುಂಭಾಗದಲ್ಲಿ ಜಾಲಿ ಮುಳ್ಳಿನ ಗುಡ್ಡೆ ಹಾಕಿ ಅದರ ಮೇಲೆ ಮಕ್ಕಳನ್ನ ಮಲಗಿಸಿ ಉರುಳಾಡಿಸಲಾಗುತ್ತೆ. ಹೀಗೆ ಮಾಡಿದರೆ ಇಡೀ ಊರಿಗೆ ಒಳ್ಳೇದಾಗುತ್ತೆ ಎಂದು ನಂಬಿದ್ದಾರೆ.
ಮುಳ್ಳಿನ ಮೇಲೆ ಮಕ್ಕಳನ್ನ ಮಲಗಿಸಿ ಹರಕೆ ತೀರಿಸುವ ತಾಯಂದಿರನ್ನು ಕೇಳಿದರೆ, ನಾವು ತಲಾ ತಲಾಂತರದಿಂದ ಈ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳುತ್ತಾರೆ. ರಾಜ್ಯದೆಲ್ಲೆಡೆ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಬಗ್ಗೆ ಚರ್ಚೆಗಳು ಶುರುವಾಗಿದೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಹೂವಿನಂತ ಚರ್ಮದ ಮಕ್ಕಳನ್ನು ಮುಳ್ಳಿನ ಮೇಲೆ ಮಲಗಿಸುತ್ತಾರೆ.