ಚಿಕ್ಕಬಳ್ಳಾಪುರ: ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಕಾಲಿಗೆ ಪಿಎಸ್ಐ ರಿವಾಲ್ವರ್ ನಿಂದ ಗುಂಡು ಹಾರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಭಕ್ತರಹಳ್ಳಿ ಶ್ರೀನಿವಾಸ್ ಅಲಿಯಾಸ್ ದಂಡು ಸೀನನ ಮೇಲೆ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ಪಿಎಸ್ಐ ಸುಂದರ್ ಗುಂಡು ಹಾರಿಸಿದ್ದಾರೆ. ರಾಬರಿ ಪ್ರಕರಣ ಸಂಬಂಧ ರೌಡಿಶೀಟರ್ ಸೀನನನ್ನ ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ.
ಕುಡಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಸಹಚರರ ಜೊತೆಗೂಡಿ ಇಂಡಿಕಾ ಕಾರಿನಲ್ಲಿದ್ದ ಸೀನನ ಮೇಲೆ ದಾಳಿ ನಡೆಸಿದಾಗ, ಸೀನ ಪ್ರತಿದಾಳಿ ಮಾಡಿ ಪೊಲೀಸರ ಮೇಲೆಯೇ ಲಾಂಗ್ನಿಂದ ಬೀಸಿದ್ದಾನೆ.
ಇದ್ರಿಂದ ಆತ್ಮರಕ್ಷಣೆಗೆ ಅಂತ ಪಿಎಸ್ಐ ಸುಂದರ್ ತಮ್ಮ ರಿವಾಲ್ವರ್ ನಿಂದ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆದ್ರೂ ಶರಣಾಗದೆ ಪರಾರಿಯಾಗುತ್ತಿದ್ದ ಸೀನನ ಕಾಲಿಗೆ ಪಿಎಸ್ಐ ಗುಂಡು ಹಾರಿಸಿದ್ದು, ಸದ್ಯ ಗಾಯಾಳು ಸೀನನನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿದೆ.
ಪ್ರಕರಣ ಸಂಬಂಧ ಸೀನನ ಮೂವರು ಸಹಚರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೌಡಿಶೀಟರ್ ಸೀನನ ಮೇಲೆ ಪೊಲೀಸರ ಮೇಲಿನ ಹಲ್ಲೆ ಸೇರಿದಂತೆ ಇನ್ನೂ ಹಲವು ಪ್ರಕರಣಗಳಿವೆ.