ರಾಮನಗರ: ಕಾಡಿನಿಂದ ನಾಡಿಗೆ ಬಂದು ಮೇಕೆ ಹಾಗು ಕುರಿಗಳನ್ನು ಕೊಂದು ತಿನ್ನುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ರಾಮನಗರ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ಚಿರತೆಯ ಉಪಟಳ ಜಾಸ್ತಿಯಾಗಿತ್ತು. ಒಂದು ವಾರದಲ್ಲಿ ನಾಲ್ಕು ಮೇಕೆ ಹಾಗೂ 2 ಕುರಿಗಳನ್ನು ಗ್ರಾಮಕ್ಕೆ ನುಗ್ಗಿ ತಿಂದು ಹಾಕಿತ್ತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಬೋನುಗಳನ್ನು ಇಟ್ಟಿದರು. ಗ್ರಾಮದ ಚಿಕ್ಕ ಮರೀಗೌಡ ಎಂಬುವವರ ತೋಟದಲ್ಲಿ ಇಟ್ಟಿದ್ದ ಬೋನಿನಲ್ಲಿ ಎರಡುವರೆ ವರ್ಷದ ಗಂಡು ಚಿರತೆ ಸೆರೆಯಾಗಿದೆ.
ಘಟನೆ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬನ್ನೇರುಘಟ್ಟ ವನ್ಯಜೀವಿ ಧಾಮಕ್ಕೆ ಬಿಡಲು ಚಿರತೆಯನ್ನು ರವಾನಿಸಿದ್ದಾರೆ.