ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರನ ಸಾವು ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಕೊಲೆ ಮಾಡಿ ಚಾನಲ್ ನಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಚಂದ್ರು ತಂದೆ ರಮೇಶ್ (Ramesh) ಕೂಡ ಈಗಾಗಲೇ ಹೊನ್ನಾಳಿ ಪೊಲೀಸ್ (Honnalli Police Station) ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಸರ್ಕಾರದ ಅವಿಭಾಜ್ಯ ಅಂಗವಾಗಿರುವ ರೇಣುಕಾಚಾರ್ಯ ಅವರೇ ಪೊಲೀಸ್ ತನಿಖೆ ಮೇಲೆ ಅನುಮಾನ ಗೊಂಡಿದ್ದಾರೆ. ಕೊಲೆಗಾರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದಾರೆ.
ಚಂದ್ರು ಪೋಸ್ಟ್ ಮಾರ್ಟಂ ವರದಿ ಪೊಲೀಸರ ಕೈ ಸೇರಿಲ್ಲ. ಈಗಾಗಲೇ ಚಂದ್ರು ಸಾವು ಸಹಜವಲ್ಲ ಕೊಲೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಚಂದ್ರುವಿನ ಕಾರು ತುಂಗಾ ನಾಲೆಯಲ್ಲಿ ಸಿಕ್ಕಿದ್ದು, ಮೃತದೇಹ ಹಿಂಬದಿ ಸೀಟ್ನಲ್ಲಿ ಸಿಕ್ಕಿದೆ. ಅಲ್ಲದೇ ಆತನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ರು ಅಂತ ಆರೋಪಿಸಿದ್ದಾರೆ. ಆದರೆ ಡಯಾಟಂ ಟೆಸ್ಟ್ ನಲ್ಲಿ ಕೂಡ ಇದೊಂದು ಅಪಘಾತ ಎಂದು ಬಂದಿದೆ. ಈ ಎಲ್ಲಾ ವರದಿಗಳ ಮೇಲೆ ನಂಬಿಕೆ ಇಲ್ಲದೆ ಹೆಚ್ವಿನ ತನಿಖೆಗೆ ಒತ್ತಾಯಿಸಿದೆ. ಈ ಮಧ್ಯೆ ಅಲ್ಲದೆ ಮಾಜಿ ಸಿಎಂ ಪುತ್ರ ವಿಜಯೇಂದ್ರ, ಮುತಾಲಿಕ್ ಸೇರಿದಂತೆ ಕ್ಷೇತ್ರದ ಜನರು ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ರು. ಇದನ್ನೂ ಓದಿ: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ – ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಮನವಿ
ಇಂದು ರೇಣುಕಾಚಾರ್ಯ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಮುಖಂಡರು ಭೇಟಿ ನೀಡಲಿದ್ದಾರೆ. ಸರಿ ಸುಮಾರು ಒಂದು ಗಂಟೆಗಳ ಕಾಲ ರೇಣುಕಾಚಾರ್ಯ ಮನೆಯಲ್ಲಿದ್ದು ಸಾಂತ್ವನ ಹೇಳಲಿದ್ದಾರೆ. ಆ ಸಂದರ್ಭದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಪೊಲೀಸರು ನಡೆಸುತ್ತಿರುವ ತನಿಖೆ ನಮಗೆ ಅನುಮಾನಾಸ್ಪದವಾಗಿದೆ. ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ವಹಿಸಬೇಕು ಅಂತ ಮನವಿ ಮಾಡೋ ಸಾಧ್ಯತೆ ಇದೆ. ಈಗಾಗಲೇ ಡಯಾಟಂ ವರದಿ ಪೊಲೀಸರ ಕೈ ಸೇರಿದ್ದು, ಇಂದು ಸಂಜೆಯೊಳಗೆ ಮರಣೋತ್ತರ ಪರೀಕ್ಷಾ ವರದಿ ಕೂಡ ಪೊಲೀಸರ ಕೈಸೇರಲಿದ್ದು ಸತ್ಯಾ ಸತ್ಯಾಸತ್ಯತೆ ವರದಿ ಬಂದ ನಂತರ ತಿಳಿಯಲಿದೆ.
ಒಟ್ಟಾರೆಯಾಗಿ ಚಂದ್ರುವಿನ (Chandrashekhar) ಸಾವು ಎರಡು ಜಿಲ್ಲೆಗಳ ಪೊಲೀಸರ ನಿದ್ದೆಗೆಡಿಸಿದ್ದು, ಇಂದು ಅಥವಾ ನಾಳೆ ಮರಣೋತ್ತರ ಪರೀಕ್ಷಾ ವರದಿ ಅಧಿಕೃತವಾಗಿ ಪೊಲೀಸರ ಕೈ ಸೇರಲಿದ್ದು ಸತ್ಯಾಂಶ ಹೊರಬರಲಿದೆ. ಆದರೆ ಚಂದ್ರು ಕುಟುಂಬಸ್ಥರು ಮಾತ್ರ ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ಹೆಚ್ಚಿನ ತನಿಖೆಗೆ ಒತ್ತಾಯಿಸ್ತಿದ್ದಾರೆ. ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.