ಬೆಂಗಳೂರು: ಕಾಂಗ್ರೆಸ್ ನ ಜಾತಕವನ್ನ ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ಸೇರ್ಪಡೆಗೊಂಡು ಮಾತನಾಡಿದ ಅವರು, ನನ್ನ ಭತ್ತಳಿಕೆಯಲ್ಲಿ ಇನ್ನು ಅಸ್ತ್ರಗಳಿವೆ. ಇವೆಲ್ಲವನ್ನು ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ. ಕಾಂಗ್ರೆಸ್ನಲ್ಲಿ ತತ್ವ ಸಿದ್ದಾಂತಗಳನ್ನು ಮಾರಿಕೊಂಡವರಿಗೆ ಬೆಲೆ. ನಾನು ಪಕ್ಷ ಬಿಟ್ಟಿದ್ದಕ್ಕೆ ಕಾಂಗ್ರೆಸ್ ನವರು ಉತ್ತರ ಕೊಡಬೇಕು ಎಂದರು.
40 ವರ್ಷ ಕಾಂಗ್ರೆಸ್ ಗಾಗಿ ದುಡಿದಿದ್ದೇನೆ. ಆದರೆ ಬಿ ಫಾರಂ ನೋಡಿಯೇ ಇಲ್ಲ. ಬಿ ಫಾರಂ ಪಡೆಯದೇ ಇರುವಷ್ಟು ಕಳಪೆ ನಾನಲ್ಲ. ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ. ನನ್ನನ್ನು ಅಲ್ಲಿ ನಡೆಸಿಕೊಂಡ ರೀತಿ ಸರಿಯಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಡಾ.ಪರಮೇಶ್ವರ್ ಅವರು ಚೇಲಾಗಳನ್ನ ಇಟ್ಟುಕೊಂಡು ಮಹದೇವಪುರ, ನೆಲಮಂಗಲ ಟಿಕೆಟ್ ಸೇಲ್ ಮಾಡಿದ್ದಾರೆ. ದೇವನಹಳ್ಳಿ, ಯಲಹಂಕ ಟಿಕೆಟ್ ವೀರಪ್ಪ ಮೊಯ್ಲಿ ಅವರಿಂದ ಸೇಲ್ ಆಗಿದೆ ಎಂದು ನೇರ ಆರೋಪ ಮಾಡಿದರು.
ಮಲ್ಲಿಕಾರ್ಜುನ ಖರ್ಗೆ ದೊಡ್ಡ ನಾಯಕ ಆದರೆ ಅವರ ಮಾತು ಕಾಂಗ್ರೆಸ್ ನಲ್ಲಿ ನಡೆಯೋದಿಲ್ಲ. ವೀರಪ್ಪ ಮೊಯ್ಲಿಗೆ ದಲಿತರನ್ನ ಕಂಡರೆ ಆಗೋದಿಲ್ಲ. ದಲಿತ ಮುಖ್ಯಮಂತ್ರಿ ಆಗಬೇಕು ಅಂತ ಮಾತಾಡಿದ್ದಕ್ಕೆ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.