ಬೆಂಗಳೂರು: ಸಾಲದ ಕಂತು ಪಾವತಿಸಿಲ್ಲ ಎಂದು ಸಾರ್ವಜನಿಕವಾಗಿ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಯಿಂದ ನಿಂದನೆಗೊಳಗಾದ ಕಾರಣ ಕ್ಯಾಬ್ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಗರದ ಬೈಯ್ಯಪ್ಪನಹಳ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಕ್ಯಾಬ್ ಚಾಲಕರಾಗಿದ್ದ ಅನಿಲ್(25) ಮೃತ ದುರ್ದೈವಿ. ಸಾವಿಗೂ ಮುನ್ನ ಅನಿಲ್ ಮನೆಯಲ್ಲಿ ಮೊಬೈಲ್ ವಿಡಿಯೋ ರೆಕಾರ್ಡ್ ಮಾಡಿ ನೇಣಿಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಸಾಲವೇ ಕಾರಣ. ಯಾವುದೇ ಕಾರಣಕ್ಕೂ ಬ್ಯಾಂಕ್ನಲ್ಲಿ ಯಾರೂ ಸಾಲ ಮಾಡಬೇಡಿ. ಹೆಂಡತಿ, ಮಕ್ಕಳು ಯಾರಿಂದಲೂ ನನಗೆ ಬೇಜಾರಿಲ್ಲ. ಸಾಲ ಮಾಡಬೇಡಿ ಫ್ರೆಂಡ್ಸ್, ಗುಡ್ಬೈ ಎಂದು ಅನಿಲ್ ಹೇಳಿರುವ ಮೊಬೈಲ್ ವಿಡಿಯೋ ಪತ್ತೆಯಾಗಿದೆ.
ಅನಿಲ್ ಬೆನ್ನಿಗಾನಹಳ್ಳಿಯ ಎಸ್ಬಿಐ ಬ್ಯಾಂಕ್ ಶಾಖೆಯಲ್ಲಿ 5 ಲಕ್ಷ ರೂ. ಸಾಲ ಮಾಡಿದ್ದರು. ಆದ್ರೆ ಕಳೆದ ಮೂರು ತಿಂಗಳ ಕಂತು ಪಾವತಿಸಿರಲಿಲ್ಲ. ಹೀಗಾಗಿ ಕಂತು ಕಟ್ಟಿ ಎಂದು ಕಳೆದ 15 ದಿನಗಳಿಂದ ಬ್ಯಾಂಕ್ ಸಿಬ್ಬಂದಿ ಹೇಳಿದ್ದರು. ಮಂಗಳವಾರ ಮನೆ ಬಳಿ ಬಂದ ಬ್ಯಾಂಕ್ ಸಿಬ್ಬಂದಿ, ಕಂತು ಕಟ್ಟಿಲ್ಲವೆಂದರೆ ಮನೆ ಹರಾಜು ಹಾಕುವ, ನೋಟಿಸ್ ನೀಡುವ ಬೆದರಿಕೆ ಹಾಕಿದ್ದರು.
ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಮಾತಿನಿಂದ ಮನನೊಂದು ಅನಿಲ್ ನೇಣಿಗೆ ಶರಣಾಗಿದ್ದಾರೆ. ಅನಿಲ್ ತನ್ನ ತಂದೆ, ತಾಯಿ ಹಾಗೂ ಹೆಂಡತಿ ಮಕ್ಕಳನ್ನ ಅಗಲಿದ್ದಾರೆ.