– ಇಂದು ಪುನಃ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ
ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಕೇಸ್ ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ರವಿ ಬೆಳಗೆರೆ ಅವರು ಜೈಲಿನಲ್ಲಿ 2ನೇ ರಾತ್ರಿ ಕಳೆದಿದ್ದಾರೆ.
ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಮಂಗಳವಾರ ಜೈಲಾಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯರು ರವಿ ಬೆಳಗೆರೆಯವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಅಗತ್ಯವಿಲ್ಲ. ರಕ್ತಪರೀಕ್ಷೆ ವರದಿ ಬಂದ ಬಳಿಕ ನೋಡೋಣ ಎಂದು ಹೇಳಿ ವಾಪಸ್ ಕಳುಹಿಸಿದ್ದರು.
ರವಿ ಬೆಳಗೆರೆ ಆರೋಗ್ಯದಲ್ಲಿ ಬದಲಾವಣೆ ಸಾಧ್ಯತೆ ಹಿನ್ನಲೆಯಲ್ಲಿ ಜೈಲಿನಲ್ಲಿಯೇ ವೈದ್ಯರನ್ನು ನಿಯೋಜಿಸಲಾಗಿದೆ. ರಾತ್ರಿ 11.30ರ ವೇಳೆಗೆ ಮನೆಯ ಊಟ ಸೇವಿಸಿದ ರವಿ ಬೆಳಗೆರೆ ನಿದ್ದೆಗೆ ಜಾರಿದ್ದರು. ಸದ್ಯ ಜೈಲಾಸ್ಪತ್ರೆಯ 8ನೇ ಕೊಠಡಿಯಲ್ಲಿರುವ ರವಿ ಬೆಳಗೆರೆಯವರನ್ನು ಇಂದು ಮಧ್ಯಾಹ್ನ ಪುನಃ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚೇತನಾ ಬೆಳಗೆರೆ, ನಮ್ಮ ತಂದೆಯವರಿಗೆ ಮೊದಲೇ ಆರೋಗ್ಯ ಸರಿಯಿಲ್ಲ ಇದರ ಮಧ್ಯೆ ಅವರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದರು.